ಗಿಣಿ ಹೇಳ ಹೊರಟಿರೋ ಕಥೆ ಸಾಮಾನ್ಯವಾದುದಲ್ಲ!

ಬೆಂಗಳೂರು: ಸದ್ಯ ಗಿಣಿ ಹೇಳಿದ ಕಥೆ ಚಿತ್ರ ಎಲ್ಲೆಡೆ ಸುದ್ದಿಯಲ್ಲಿದೆ. ಬಿಡುಗಡೆಗೆ ತಯಾರಾಗಿ ನಿಂತಿರೋ ಈ ಸಿನಿಮಾ ಹೆಸರಿನಷ್ಟೇ ವಿಶಿಷ್ಟವಾದ ಅನೇಕ ವಿಚಾರಗಳನ್ನೂ ಬಚ್ಚಿಟ್ಟುಕೊಂಡಿದೆ. ಇದರ ಸಾರಥ್ಯ ವಹಿಸಿಕೊಂಡಿರುವವರು ದೇವ್ ರಂಗಭೂಮಿ. ಈ ಚಿತ್ರದ ನಿರ್ಮಾಣದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಮುಖ್ಯ ಪಾತ್ರವನ್ನೂ ಕೂಡಾ ದೇವ್ ನಿಭಾಯಿಸಿದ್ದಾರೆ. ಈ ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.

ದೇವ್ ರಂಗಭೂಮಿಯಲ್ಲಿ ನಟನಾಗಿ ಅಭಿನಯಿಸಿದ್ದರೂ ನಾಯಕನಾಗಿ ಚಿತ್ರರಂಗದಲ್ಲಿ ಅವರದ್ದಿದು ಮೊದಲ ಪ್ರಯತ್ನ. ಆದರದು ಪರ್ಫೆಕ್ಟ್ ಆಗಿರಬೇಕೆಂಬುದು ಅವರ ಹಂಬಲ. ಆ ಕಾರಣದಿಂದಲೇ ಅಖಂಡ 4 ವರ್ಷ ತೆಗೆದುಕೊಂಡು ಗಿಣಿ ಹೇಳಿದ ಕಥೆಯ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ತಾವೇ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ನಾಗರಾಜ್ ಉಪ್ಪುಂದ ಅವರಿಗೆ ಒಪ್ಪಿಸಿದ್ದಾರೆ.

ಈ ಚಿತ್ರ ಯಾವ ಬಗೆಯದ್ದು ಎಂಬುದು ಕಥೆ ಏನು ಎಂಬಷ್ಟೇ ಸಂದಿಗ್ಧದ ಪ್ರಶ್ನೆ. ಯಾಕೆಂದರೆ ಇದು ಮಾಮೂಲಿ ಜಾಡಿನದ್ದಲ್ಲ. ಹಾಗಂತ ಕಲಾತ್ಮಕ ಚೌಕಟ್ಟಿನದ್ದು ಅಂದುಕೊಳ್ಳುವಂತೆಯೂ ಇಲ್ಲ. ಗಂಭೀರವಾದ ವಿಚಾರವನ್ನು ಹಾಸ್ಯ ಶೈಲಿಯಲ್ಲಿ ದಾಟಿಸೋದೂ ಸೇರಿದಂತೆ ಇಡೀ ಸಿನಿಮಾವನ್ನು ದೇವ್ ಅಂದುಕೊಂಡಂತೆಯೇ ಸಹಜವಾಗಿ ಕಟ್ಟಿ ಕೊಟ್ಟಿದ್ದಾರೆ. ಈ ಮೂಲಕ ಹೊಸ ವರ್ಷದ ಮೊದಲ ಹಂತದಲ್ಲಿಯೇ ಭರಪೂರವಾದೊಂದು ಗೆಲುವು, ಹೊಸ ಅಲೆಯ ಚಿತ್ರಗಳ ಹಂಗಾಮಕ್ಕೆ ಗಿಣಿ ಹೇಳಿದ ಕಥೆ ಶ್ರೀಕಾರ ಹಾಕೋ ಲಕ್ಷಣಗಳಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *