ತಮ್ಮ ಎಲ್ಲಿ ಹೋದ್ರು ಪ್ರಶ್ನೆಗೆ ಅಣ್ಣ ಸತೀಶ್ ಜಾರಕಿಹೊಳಿ ಉತ್ತರ

ಚಿತ್ರದುರ್ಗ: ಸಂಪುಟ ಪುನಾರಚನೆಯ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯಾವ ನಾಯಕರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇತ್ತ ಕಾಂಗ್ರೆಸ್ ಹೈಕಮಾಂಡ್ ಸೋದರ ಮನವೊಲಿಸಲು ಸತೀಶ್ ಜಾರಕಿಹೊಳಿ ಅವರನ್ನೇ ನೇಮಿಸಿತ್ತು. ಇಂದು ಚಿತ್ರದುರ್ಗ ಜಿಲ್ಲೆಯ ಜವನಗೊಂಡನಹಳ್ಳಿಯಲ್ಲಿ ಮಾತನಾಡಿದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಎಲ್ಲಿ ಹೋದ್ರು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಕಾಂಗ್ರೆಸ್‍ಗೆ ಆಪರೇಷನ್ ಕಮಲದ ಭೀತಿ ಇಲ್ಲ. ಸೋದರ ರಮೇಶ್ ಜಾರಕಿಹೊಳಿ ವೈಯಕ್ತಿಕ ಕೆಲಸದ ಮೇಲೆ ಹೋಗಿರಬಹುದು. ರಮೇಶ್ ಜಾರಕಿಹೊಳಿ ಅವರು ಇನ್ನೋರ್ವ ಸೋದರ, ಬಿಜೆಪಿ ನಾಯಕ ಬಾಲಚಂದ್ರ ಜಾರಕಿಹೊಳಿ ಸಂಪರ್ಕದಲ್ಲಿರಬಹುದು. ಅದರ ಅರ್ಥ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ತಾರೆ ಅಂತಾ ಅಲ್ಲ. ಸಚಿವ ಸ್ಥಾನ ಕಳೆದುಕೊಂಡಿದ್ದರಿಂದ ಅಸಮಾಧಾನಗೊಂಡಿದ್ದಾರೆ. ಆದ್ರೆ ಎಲ್ಲಿಯೂ ಹೋಗಲ್ಲ. ಇನ್ನು ಪಕ್ಷ ಬಿಡುವ ವಿಚಾರ ನನಗೆ ಗೊತ್ತಿಲ್ಲ, ಮುಂದೆ ಏನು ಆಗುತ್ತೆ ಕಾದುನೋಡೋಣ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದರು.

ರಮೇಶ್ ಜಾರಕಿಹೊಳಿ ಖಾಸಗಿ ವಿಚಾರಕ್ಕಾಗಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿರುವ ಸಾಧ್ಯತೆಗಳಿವೆ. ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಹೇಳಿದರು.

ಇದೇ ವೇಳೆ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿಕೆ ಪ್ರತಿಕ್ರಿಯಿಸಿದ ಸಚಿವರು, ಮಹಾರಾಷ್ಟ್ರಕ್ಕೆ ಜೈ ಅನ್ನುವವರು ಯಾರು ಶಾಸಕರಾಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯವರು ಬೆಳಗಾವಿಯಲ್ಲಿ ಶಾಸಕರಾಗಿದ್ದಾರೆ ಎಂದು ತಿರುಗೇಟು ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *