ಊಟ ಮಾಡಿ ಕೈ ತೊಳೆಯುತ್ತಿದ್ದ ಅಪ್ಪನನ್ನ ಕೊಲೆಗೈದ ಪೇದೆ..!

-ಪತಿ-ಪತ್ನಿ ಜಗಳದಲ್ಲಿ ತಂದೆಯನ್ನ ಕೊಂದ ಮಗ

ಹೈದರಾಬಾದ್: ಪೊಲೀಸ್ ಕಾನ್ಸ್‌ಸ್ಟೇಬಲ್ ಒಬ್ಬ ತನ್ನ ಪತ್ನಿ ಜೊತೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿ ಬಳಿಕ ಅಲ್ಲೇ ಇದ್ದ ಅಪ್ಪನನ್ನು ಕತ್ತು ಹಿಸುಕಿ ಕೊಲೆಗೈದ ಅಮಾನವೀಯ ಘಟನೆಯೊಂದು ಮುಶಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಆರೋಪಿ ಬಿ ವೆಂಕಟೇಶ್ ನನ್ನು ಬಂಧಿಸಿದ್ದಾರೆ. ಆರೋಪಿ ಮಾನಸಿಕ ಖಿನ್ನತೆಗೊಳಗಾಗಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ. ವೆಂಕಟೇಶ್ 2010ರ ಬ್ಯಾಚ್ ನ ಕಾನ್ಸ್ ಸ್ಟೇಬಲ್ ಆಗಿದ್ದಾನೆ ಎಂದು ವರದಿಯಾಗಿದೆ.

ಘಟನೆ ವಿವರ:
ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ 58 ವರ್ಷದ ಎಲ್ಲಯ್ಯನನ್ನು ಮಗ ವೆಂಕಟೇಶ್, ತನ್ನ ಪತ್ನಿ ಜತೆ ಜಗಳವಾಡಿ ನಂತರ ಕೊಲೆಗೈದಿದ್ದಾನೆ.

ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಎಲ್ಲಯ್ಯ ಊಟ ಮಾಡಿ ಕೈ ತೊಳೆಯುತ್ತಿದ್ದರು. ಈ ವೇಳೆ ಸಡನ್ ಆಗಿ ಬಂದ ವೆಂಕಟೇಶ್, ಎಲ್ಲಯ್ಯನ ಮುಖಕ್ಕೆ ಟವೆಲ್ ನಿಂದ ಬಿಗಿಹಿಡಿದಿದ್ದಾನೆ. ನಂತರ ಕತ್ತು ಹಿಸುಕಿದ್ದಾನೆ. ಇಷ್ಟು ಮಾತ್ರವಲ್ಲದೇ ವೆಂಕಟೇಶ್ ಎದೆ ಹಾಗೂ ದೇಹದ ಇತರ ಭಾಗಗಳಿಗೆ ಮನಬಂದಂತೆ ಚೂರಿಯಿಂದ ಇರಿದಿದ್ದಾನೆ ಅಂತ ಮುಶಿರಾಬಾದ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಗಂಗಾಧರ್ ತಿಳಿಸಿದ್ದಾರೆ.

ಎಲ್ಲಯ್ಯ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆರೋಪಿ ವೆಂಕಟೇಶ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದನು. ಈತನಿಗೆ ಮೂವರು ಮಕ್ಕಳಿದ್ದು, ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಪತ್ನಿ ಜೊತೆ ಜಗಳವಾಡುತ್ತಿದ್ದನು. ಇಂದು ಕೂಡ ಅದೇ ರೀತಿ ಜಗಳವಾಡಿದ್ದು, ಪತಿ-ಪತ್ನಿ ಜಗಳದಲ್ಲಿ ಮುಗ್ಧ ತಂದೆ ಬಲಿಯಾಗಿದ್ದಾರೆ ಅಂತ ಅವರು ವಿವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *