ಬಿಜೆಪಿ ಔತಣಕೂಟದಲ್ಲಿ ರಮೇಶ್ ಜಾರಕಿಹೊಳಿ ಭಾಗವಹಿಸಿದ್ದು ಯಾಕೆ: ಉತ್ತರ ಕೊಟ್ಟ ಅಶೋಕ್

ಬೆಳಗಾವಿ: ಬೆಳಗಾವಿಯನ್ನು ಎರಡು ಭಾಗ ಮಾಡಿದ ಡಿ.ಕೆ.ಶಿವಕುಮಾರ್ ಔತಣಕೂಟಕ್ಕೆ ಹೋಗಲು ರಮೇಶ್ ಜಾರಕಿಹೊಳಿ ಇಷ್ಟವಿರಲಿಲ್ಲ. ಹೀಗಾಗಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ಮೇಲಿನ ಪ್ರೀತಿ, ವಿಶ್ವಾಸದಿಂದ ಬಂದಿರಬಹುದು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಇರುವುದು ಎಣ್ಣೆ ಸೀಗೇಕಾಯಿ ಸಂಬಂಧ ಅಂತ ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಮಹಾಂತೇಶ ಕವಟಗಿಮಠ ಅವರು ನಗರದಲ್ಲಿ ಬುಧವಾರ ಆಯೋಜಿಸಿದ್ದ ಔತಣಕೂಟಕ್ಕೆ ರಮೇಶ್ ಜಾರಕಿಹೊಳಿ ಬಂದಿರಬಹುದು. ಆದರೆ ನಿರ್ದಿಷ್ಟವಾಗಿ ಯಾವ ಕಾರಣಕ್ಕೆ ಬಂದಿದ್ದರು ಎನ್ನುವ ಮಾಹಿತಿ ನನಗಿಲ್ಲ ಎಂದರು.

ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅಧಿಕಾರಲ್ಲಿ ಇರುವಾಗಲೇ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಸಿಎಂ ಕುಮಾರಸ್ವಾಮಿಗೆ ಶೀಘ್ರವೇ ಕಾಂಗ್ರೆಸ್ ತಲಾಖ್ ತಲಾಖ್ ತಲಾಖ್ ಅಂತ ಹೇಳಲಿದೆ. ಸೋಡಾ ಚೀಟಿ ಪಡೆಯಲು ಕುಮಾರಸ್ವಾಮಿ ಸಿದ್ಧರಾಗಿರಲಿ ಎಂದು ಲೇವಡಿ ಮಾಡಿದ್ದಾರೆ.

ನಿನ್ನೆ ಆಗಿದ್ದೇನು?:
ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಗೂ ಬಾರದೇ ಚಕ್ಕರ್ ಹೊಡೆದಿದ್ದ ಜಾರಕಿಹೊಳಿ, ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪಕ್ಕದಲ್ಲೇ ಕುಳಿತು ರಾತ್ರಿಯ ಭೋಜನ ಸವಿದರು. ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಳ್ಳದ ರಮೇಶ್ ಜಾರಕಿಹೊಳಿ ಬಿಜೆಪಿ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಆಯೋಜಿಸಿದ್ದ ಡಿನ್ನರ್ ನಲ್ಲಿ ಯಡಿಯೂರಪ್ಪ, ಕತ್ತಿ ಜೊತೆ ಒಂದೇ ಟೇಬಲ್‍ನಲ್ಲಿ ಕುಳಿತು ಚರ್ಚೆ ನಡೆಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *