3 ಕೋಟಿ ರೂ. ಮಾಣಿಕ್ ಚಾಂದ್ ಮಾಲ್‍ಗಾಗಿ ಕೈ, ಕಾಲು ಕಟ್ಟಿ ಕ್ಯಾಂಟರ್ ಡ್ರೈವರ್ ಕೊಲೆ!

ಚಿಕ್ಕಬಳ್ಳಾಪುರ: 3 ಕೋಟಿ ರೂ. ಮೌಲ್ಯದ ಮಾಣಿಕ್ ಚಾಂದ್ ಮಾಲ್ ಗಾಗಿ ಕ್ಯಾಂಟರ್ ವಾಹನದ ಚಾಲಕನನ್ನು ಕೈ ಕಾಲು ಕಟ್ಟಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಸೂಲ್ ಸಾಬ್ ಕೊಲೆಯಾದ ವ್ಯಕ್ತಿಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ನಿವಾಸಿಯಾಗಿದ್ದಾರೆ. ರಸೂಲ್ ಸಾಬ್ ಸ್ವತಃ ಕ್ಯಾಂಟರ್ ಮಾಲೀಕರಾಗಿದ್ದು, ತಾವೇ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬೆಂಗಳೂರಿನಿಂದ ಹೈದರಾಬಾದ್‍ಗೆ 3 ಕೋಟಿ ರೂ. ಮೌಲ್ಯದ ಮಾಣಿಕ್ ಚಾಂದ್ ಗುಟ್ಕಾ ಪ್ಯಾಕೆಟಿನ ಬಾಕ್ಸ್ ಗಳನ್ನ ತುಂಬಿಕೊಂಡು ರಸೂಲ್ ಸಾಬ್ ಏಕಾಂಗಿಯಾಗಿ ಹೈದರಾಬಾದ್ ನತ್ತ ಹೊರಟಿದ್ದರು. ಆದರೆ ದಾರಿ ಮಧ್ಯೆ ಆಂಧ್ರದ ಅನಂತಪುರದ ರಾಪ್ತಾಡು ಬಳಿ ಇವರ ಮೇಲೆ ದಾಳಿ ನಡೆಸಿದ ಆಗಂತಕರು ಚಾಲಕ ರಸೂಲ್ ಸಾಬ್ ಕೈ ಕಾಲು ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನ ರಸ್ತೆ ಬದಿ ಬಿಸಾಡಿದ್ದಾರೆ.

ರಸೂಲ್ ಸಾಬ್ ಕೊಲೆ ಮಾಡಿದ ಮಾಲ್ ಸಮೇತ ಕ್ಯಾಂಟರ್ ತೆಗೆದುಕೊಂಡು ಹೋದ ದುಷ್ಕರ್ಮಿಗಳು 3 ಕಿಲೋ ಮೀಟರ್ ಮುಂದೇ ಸಾಗಿ ರೈತರ ಜಮೀನೊಂದರಲ್ಲಿ ಮಾಣಿಕ್ ಚಾಂದ್ ಮಾಲನ್ನ ಬೇರೊಂದು ವಾಹನಕ್ಕೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ. ಇದನ್ನ ಗಮನಿಸಿದ ಸ್ಥಳೀಯರು ಪ್ರಶ್ನೆ ಮಾಡಿದಾಗ ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ.

ಸ್ಥಳೀಯರ ಮೇಲೆ ಹಲ್ಲೆ ನಡೆಸಿದ ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಬರುವಷ್ಟರಲ್ಲಿ ಅರ್ಧ ಮಾಣಿಕ್ ಚಾಂದ್ ಪಾಕೆಟ್ ಬಾಕ್ಸ್ ತುಂಬಿಕೊಂಡ ದುಷ್ಕರ್ಮಿಗಳು ಬೇರೊಂದು ವಾಹನದಲ್ಲಿ ಎಸ್ಕೇಪ್ ಆಗಿದ್ದಾರೆ. ಈ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ರಾಪ್ತಾಡು ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮತ್ತೊಂದೆಡೆ ದುಷ್ಕರ್ಮಿಗಳು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದ ವೇಳೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾಗಿ ಮಾಹಿತಿ ಲಭಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *