ಯೋಗಿ ಬೇಡ ಮೋದಿಯೇ ಪ್ರಧಾನಿ ಅಭ್ಯರ್ಥಿ ಆಗಲಿ- ಪೇಜಾವರಶ್ರೀ

ಉಡುಪಿ: ಪಂಚರಾಜ್ಯ ಸೋಲು ಅನುಭವಿಸಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಪಿಯಲ್ಲಿ ಪೇಜಾವರ ಶ್ರೀಗಳು ಸಾಕಷ್ಟು ಕಿವಿಮಾತು ಹೇಳಿದ್ದಾರೆ. ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ವಿರೋಧ ಕಟ್ಟಿಕೊಳ್ಳಬೇಡಿ ಅಂತ ಸಲಹೆ ಕೊಟ್ಟಿದ್ದಾರೆ.

ಪಂಚರಾಜ್ಯ ಫಲಿತಾಂಶವು ಪ್ರಧಾನಿ ಮೋದಿ ಅವರಿಗೆ ಎಚ್ಚರಿಕೆಯಾಗಿದೆ ಎಂದಿರುವ ಶ್ರೀಗಳು, ಆರ್ಥಿಕ ಸುಧಾರಣೆ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಆದ್ಯತೆ ಕೊಡಲಿ. ಮಂದಿರ ನಿರ್ಮಾಣ ಹಿಂದೂ ಮತದಾರರ ಉತ್ಸಾಹವನ್ನು ಹೆಚ್ಚಿಸಬಹುದು. ಎನ್‍ಡಿಎ ಮೈತ್ರಿಕೂಟದ ಮೂಲಕ ಸಮಾನ ವಿಚಾರಧಾರೆಯುಳ್ಳ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಸಾಧಿಸಬೇಕು ಎಂದು ತಿಳಿಸಿದರು.

ಚಂದ್ರಬಾಬು ನಾಯ್ಡು ವಿರೋಧ ಕಟ್ಟಿಕೊಳ್ಳಬೇಡಿ:
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿರೋಧವನ್ನು ಕಟ್ಟಿಕೊಂಡರೆ ಬಿಜೆಪಿಗೆ ನಷ್ಟವಾಗುತ್ತದೆ. ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಬಗ್ಗುಬಡಿಯಲು ಹಠ ಹಿಡಿದಿದ್ದಾರೆ. ನೀವು ಮಾಜಿ ಪ್ರಧಾನಿ ವಾಜಪೇಯಿ ಅವರ ನೀತಿಯನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರಧಾನಿ ಮೋದಿ ಕೆಲವು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಮೋದಿ ಬಗ್ಗೆ ಮೊದಲಿದ್ದ ನಿರೀಕ್ಷೆ ಈಗ ಜನರಲ್ಲಿ ಇಲ್ಲ, ಜನ ನಿರೀಕ್ಷೆ ಇಟ್ಟಷ್ಟು ಕೆಲಸ ದೇಶದಲ್ಲಿ ಆಗಿಲ್ಲ ಎಂದು ಟೀಕಿಸಿದರು. ನೋಟ್ ಬ್ಯಾನ್ ಫಲ ಜನಸಾಮಾನ್ಯರಿಗೆ ಮುಟ್ಟಿಲ್ಲ ಎಂದರು.

ಯೋಗಿ ಪ್ರಧಾನಿ ಅಭ್ಯರ್ಥಿಯಾಗಬಾರದು:
ಸಿಎಂ ಯೋಗಿ ಆದಿತ್ಯನಾಥ್ ಮುಂದಿನ ಪ್ರಧಾನಿ ಅಭ್ಯರ್ಥಿ ಎನ್ನುವ ವಿಚಾರ ಉತ್ತರ ಪ್ರದೇಶದ ಧರ್ಮ ಸಂಸತ್‍ನಲ್ಲಿ ಪ್ರಕಟವಾಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಪೇಜಾವರಶ್ರೀ, ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಆಗಬೇಕು. ಸಿಎಂ ಯೋಗಿ ಮೋದಿಯಷ್ಟು ಸಮರ್ಥ ಅಭ್ಯರ್ಥಿ ಅಲ್ಲ. ಆದಿತ್ಯನಾಥ್ ಅವರು ರಾಜಕಾರಣಿಯಲ್ಲ ಅವರು ಸಂತರು. ಸಂತ ಪರಂಪರೆಯ ವ್ಯಕ್ತಿ. ಉತ್ತರ ಪ್ರದೇಶದಲ್ಲಿ ಇಷ್ಟು ಕೆಲಸಗಳನ್ನು ಮಾಡಿರುವುದೇ ವಿಶೇಷ. ಆದರೆ ಅವರು ಈಗ ಪ್ರಧಾನಿ ಅಭ್ಯರ್ಥಿ ಆಗಬಾರದು ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *