ಮಂಡ್ಯ: ಇಂದು ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ 27ನೇ ವರ್ಷದ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸುಮಲತಾ, ಅಭಿಷೇಕ್ ಹಾಗೂ ರಾಕ್ಲೈನ್ ವೆಂಕಟೇಶ್ ಅವರು ಮಂಡ್ಯದ ಕಾಲಭೈರವೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದಾರೆ.
ಅಭಿಷೇಕ್ ಮತ್ತು ಸುಮಲತಾ ಮನೆ ದೇವರಾದ ಗಂಡು ದೇವರು ಚಿಕ್ಕರಸಿನಕೆರೆ ಕಾಲಭೈರವೇಶ್ವರ ಸ್ವಾಮಿ ಮತ್ತು ಹೆಣ್ಣು ದೇವರಾದ ಮುತ್ತೆಗೆರೆ ಮಾಯಮ್ಮ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಈಗಾಗಲೇ ದೊಡ್ಡರಸಿನಕೆರೆ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಅಭಿಷೇಕ್ ಹಾಗೂ ಸುಮಲತಾ ಮುತ್ತೇಗೆರೆ ಮಾಯಮ್ಮ ದೇವಾಲಯಕ್ಕೆ ತೆರಳಿ ಅಲ್ಲಿಯೂ ಪೂಜೆ ಸಲ್ಲಿಸಿದ್ದಾರೆ.

ಅಂಬಿ ನಿಧನದ ನಂತರ ಇದೇ ಮೊದಲ ಬಾರಿಗೆ ಸುಮಲತಾ ಹಾಗೂ ಅಭಿಷೇಕ್ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದು, ಸ್ವಗ್ರಾಮದಲ್ಲಿ ಮಾಯಮ್ಮನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದಾರೆ. ನಂತರ ದೇವಾಲಯದ ಬಸವನಿಗೆ ಇಬ್ಬರು ನಮಸ್ಕರಿಸಿದ್ದಾರೆ. ಇಲ್ಲಿರುವ ಬಸವ ದೈವಿಕವಾಗಿ ತುಂಬಾ ಶಕ್ತಿಯನ್ನು ಹೊಂದಿದ್ದು ಹಾಗೂ ಬೇಡಿದ್ದನ್ನು ಈಡೇರಿಸುತ್ತದೆ ಎಂಬ ನಂಬಿಕೆ ಇದೆ. ಗ್ರಾಮದಲ್ಲಿ ಅಭಿಮಾನಿಗಳು ತಾತ್ಕಾಲಿಕವಾಗಿ ನಿರ್ಮಿಸಿದ್ದ ಅಂಬಿ ಸಮಾಧಿಗೆ ಹಾರ ಹಾಕಿ ನಮಸ್ಕರಿಸಿದರು. ಈ ವೇಳೆ ಸುಮಲತಾ ಹಾಗೂ ಅಭಿಷೇಕ್ ಭಾವುಕರಾದರು. ಡಿಸೆಂಬರ್ 6ರಂದು ಗ್ರಾಮಸ್ಥರು ದೊಡ್ಡರಸಿನಕೆರೆ ಗ್ರಾಮದಲ್ಲಿ ಊರ ಮಗನ ತಿಥಿ ಕಾರ್ಯವನ್ನು ಗ್ರಾಮದ ಸಂಪ್ರದಾಯಕ್ಕೆ ತಕ್ಕಂತೆ ನಡೆಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply