ಚಿಕ್ಕಬಳ್ಳಾಪುರದಲ್ಲಿ ಉಚಿತ ಹೆಲ್ಮೆಟ್ ಗೆ ಮುಗಿಬಿದ್ದ ಬೈಕ್ ಸವಾರರು

ಚಿಕ್ಕಬಳ್ಳಾಪುರ: ತಾನು ದುಡಿದ ಪೈಸೆ ಪೈಸೆ ಹಣವನ್ನು ಕೂಡಿಟ್ಟ ಅಡುಗೆ ಭಟ್ಟರೊಬ್ಬರು ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಿ ಮಾನವೀಯತೆ ಮೆರೆದ ಅಪರೂಪದ ದೃಶ್ಯ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.

ರಾಮಣ್ಣ ಉಚಿತವಾಗಿ ಹೆಲ್ಮೆಟ್ ವಿತರಿಸಿದ ಹೋಟೆಲ್ ಕಾರ್ಮಿಕರಾಗಿದ್ದು, ಇವರು ನಗರದ ವಿವಿಧ ಹೋಟೆಲ್‍ಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ತನ್ನ ಕಣ್ಣ ಮುಂದೆ ಬೈಕ್ ಸವಾರನೊಬ್ಬ ಬಿದ್ದು ಮುಖ ಗಾಯಗೊಳಿಸಿಕೊಂಡಿದ್ದನ್ನು ನೋಡಿದ್ದರಂತೆ. ಹೀಗಾಗಿ ಹೆಲ್ಮೆಟ್ ಇಲ್ಲದ ಸವಾರರಿಗೆ ಹೆಲ್ಮೆಟ್ ವಿತರಣೆ ಮಾಡಿ ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ರಾಮಣ್ಣ ಇಂದು ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿದರು. ಇದೇ ವೇಳೆ ಗುಲಾಬಿ ಹೂ ಸೇರಿದಂತೆ ಸಿಹಿ ಕೊಡುವುದರ ಮೂಲಕ ಹೆಲ್ಮೆಟ್ ಹಾಕಿ ನಿಮ್ಮ ಪ್ರಾಣ ಉಳಿಸಿಕೊಳ್ಳಿ ಅಂತ ಜನ ಜಾಗೃತಿ ಮೂಡಿಸಿದರು.

ಹೋಟೆಲ್ ರಾಮಣ್ಣ ಅವರ ಹೆಲ್ಮೆಟ್ ವಿತರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಎಸ್‍ಪಿ ಕಾರ್ತಿಕ್ ರೆಡ್ಡಿ, ಜಿಲ್ಲಾಧಿಕಾರಿ ಅನಿರುಧ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್ ಸೇರಿದಂತೆ ಅಧಿಕಾರಿಗಳ ದಂಡೆ ಅತಿಥಿಗಳಾಗಿ ಆಗಮಿಸಿತ್ತು. ಮತ್ತೊಂದೆಡೆ ಉಚಿತ ಹೆಲ್ಮೆಟ್ ತೆಗೆದುಕೊಳ್ಳಲು ಬೈಕ್ ಸವಾರರು ಮುಗಿಬಿದ್ದ ಪ್ರಸಂಗವೂ ನಡೆಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *