ವಿಷ್ಣುದಾದಾ ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಅಭಿಮಾನಿ

– ವಿಷ್ಣುವರ್ಧನ್ ಸ್ಮಾರಕ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಸಿಎಂ ಎಚ್‍ಡಿಕೆ ಸ್ಪಷ್ಟನೆ

ಬೆಂಗಳೂರು: ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಸ್ವಂತ ಜಾಗವನ್ನು ನೀಡಲು ಅಭಿಮಾನಿಯೊಬ್ಬರು ಮುಂದಾಗಿದ್ದಾರೆ.

ಮಂಡ್ಯದ ಕೆ.ಸಿ.ಪಿ ರಾಜಣ್ಣ ಅವರು ಸ್ಮಾರಕ ಸ್ಥಳಕ್ಕೆ ಜಮೀನು ನೀಡಲು ಮುಂದಾದ ಅಭಿಮಾನಿಯಾಗಿದ್ದು, ಮೈಸೂರಿನ ಕೆ.ಆರ್.ಎಸ್. ಜಲಾಶಯ ಬಳಿ ತಮ್ಮ ಹೆಸರಿನಲ್ಲಿ ಇರುವ 100*80 ನಿವೇಶನ ಹಾಗೂ ಪಕ್ಕದಲ್ಲೇ ಇರುವ 13 ಗುಂಟೆ ಜಾಗವನ್ನು ತಮ್ಮ ಹಣದಲ್ಲಿ ಖರೀದಿ ಮಾಡಿ ಸ್ಮಾರಕಕ್ಕೆ ನೀಡಲು ಮುಂದಾಗಿದ್ದಾರೆ.

ಮೂರು ತಿಂಗಳ ಹಿಂದೆಯಷ್ಟೆ 100*80 ನಿವೇಶನವನ್ನು ರಾಜಣ್ಣ ಅವರು ಖರೀದಿ ಮಾಡಿದ್ದರು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಆಗಿರುವ ರಾಜಣ್ಣ ಅವರು ವಿಷ್ಣುದಾದಾರ ಬಹುದೊಡ್ಡ ಅಭಿಮಾನಿ. ಹೀಗಾಗಿ ಸ್ಮಾರಕಕ್ಕೆ ಜಮೀನು ನೀಡಲು ಮುಂದಾಗಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ರಾಜಣ್ಣ ಅವರು, ಕೆ.ಆರ್.ಎಸ್ ಬಳಿ ಇರುವ ನನ್ನ ಭೂಮಿಯಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲು ತೀರ್ಮಾನ ಮಾಡಿ ಸ್ಥಳ ಖರೀದಿ ಮಾಡಿದೆ. ಇದರ ಪಕ್ಕದಲ್ಲೇ 13 ಗುಂಟೆ ಖಾಸಗಿ ವ್ಯಕ್ತಿಯ ಸ್ಥಳವಿದೆ. ಅದನ್ನು ಖರೀದಿ ಮಾಡಿ ಸರ್ಕಾರಕ್ಕೆ ನೀಡುತ್ತೇನೆ. ಅಲ್ಲದೇ ಈ ಸ್ಥಳದಲ್ಲಿ ಸರ್ಕಾರದ 4 ಎಕರೆ ಪ್ರದೇಶವಿದೆ. ನಾನು ಅಶ್ರಮ ಮಾಡಬೇಕು ಎಂದಿದೆ. ಆದರೆ ವಿಷ್ಣು ಅವರ ಸ್ಮಾರಕಕ್ಕೆ ಉಂಟಾಗಿರುವ ಗೊಂದಲ ನಿವಾರಣೆ ಮಾಡಬೇಕಿದೆ. ಅದ್ದರಿಂದ ನಮ್ಮ ಕುಟುಂಬ ಈ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

ವಿಷ್ಣು ಅವರ ಸ್ಮಾರಕ ವಿಚಾರಕ್ಕೆ ಈ ರೀತಿ ಹೋರಾಟ ಗೊಂದಲ ಉಂಟಾಗುವುದು ಬೇಡ. ಇದರಿಂದ ನಮ್ಮ ವಿಷ್ಣು ಕುಟುಂಬಕ್ಕೆ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಅಭಿಮಾನಿಗಳಿಗೂ ಒಂದು ರೀತಿ ಅವಮಾನ ಆಗುತ್ತದೆ. ಸರ್ಕಾರ ಹಾಗೂ ಭಾರತಿ ವಿಷ್ಣುವರ್ಧನ್ ಅಮ್ಮನವರು ಈ ಬಗ್ಗೆ ಮಾತನಾಡಿ ತೀರ್ಮಾನ ತೆಗೆದುಕೊಂಡರೆ ನಾನು ಈ ಕ್ಷಣಕ್ಕೆ ಜಾಗ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.

ಎಚ್‍ಡಿಕೆ ಸ್ಪಷ್ಟನೆ: ವಿಷ್ಣುದಾದಾ ಸ್ಮಾರಕ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದು, ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಸ್ಮರಿಸುವ ವಿಷ್ಯದಲ್ಲಿ ನಾನು ಬದ್ಧ. ವಿಷ್ಣು ಸ್ಮಾರಕ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಇಂದು ಮಧ್ಯಾಹ್ನ 2 ಗಂಟೆಗೆ ನಿರ್ಮಾಪಕರ ಸಂಘದ ಸದಸ್ಯರು ವಿಷ್ಣು ಕುಟುಂಬಸ್ಥರನ್ನು ಭೇಟಿ ಆಗಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *