ಅನ್ನದಾತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಪಂಚಗ್ರಹ ಮಠದ ಸ್ವಾಮೀಜಿ..!

– ಕಾಲುವೆ ನಾಶ, ಭೂಮಿ ಒತ್ತುವರಿ ಆರೋಪ

ಧಾರವಾಡ (ಹುಬ್ಬಳ್ಳಿ): ಸವದತ್ತಿ ತಾಲೂಕಿನ ರೇಣುಕಾ ಸಾಗರ ಡ್ಯಾಂನಿಂದ ಬರುವ ನೀರಿನ ಕಾಲುವೆಯ ಅಕ್ಕಪಕ್ಕದ ಜಾಗವನ್ನು ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ಪಂಚಗ್ರಹ ಹಿರೇಮಠ ಮಠದ ಸಿದ್ದೇಶ್ವರಸ್ವಾಮಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಈ ವರ್ಷ ಮುಂಗಾರು ಮಳೆ ಚೆನ್ನಾಗಿ ಆಗಿದ್ದರಿಂದ ಬಹುತೇಕ ಜಲಾಶಯಗಳು ತುಂಬಿವೆ. ಸವದತ್ತಿ ತಾಲೂಕಿನ ರೇಣುಕಾ ಸಾಗರ ಕೂಡಾ ತಕ್ಕ ಮಟ್ಟಿಗೆ ತುಂಬಿದೆ. ಆದ್ರೆ ಈ ಡ್ಯಾಂನಿಂದ ಬರುವ ನೀರಿನ ಕಾಲುವೆಗೆ ಪಂಚಗ್ರಹ ಹಿರೇಮಠ ಮಠದ ಸಿದ್ದೇಶ್ವರ ಸ್ವಾಮಿ ಕಣ್ಣಾಕಿದ್ದಾರೆ.

ಪಂಚಗ್ರಹ ಮಠಕ್ಕೆ ಸೇರಿದ 20 ಎಕರೆ ಜಮೀನಿನ ಪಕ್ಕದಲ್ಲಿ ಹಾದು ಹೋಗಿರುವ ಮಲಪ್ರಭಾ ಬಲದಂಡೆ ಕಾಲುವೆ ಹಾಗೂ ಕಾಲುವೆ ಪಕ್ಕದ ರಸ್ತೆಯನ್ನು ನಾಶ ಮಾಡಿ ಆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸ್ವಾಮೀಜಿಗೆ ಕಾಲುವೆಯ ಮರು ನಿರ್ಮಾಣ ಮಾಡುವಂತೆ ನೀರಾವರಿ ಇಲಾಖೆ ನೋಟಿಸ್ ನೀಡಿದೆ.

ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದೇಶ್ವರ ಸ್ವಾಮಿಗಳು, ನಾವು ಯಾವ ಜಾಗವನ್ನು ಒತ್ತುವರಿ ಮಾಡಿಕೊಂಡಿಲ್ಲ. ಮೊದಲಿನಿಂದ ಇದ್ದ ಕಾಲುವೆಯಲ್ಲಿ ಸರಿಯಾಗಿ ನೀರು ಹೋಗುತ್ತಿರಲಿಲ್ಲ. ಆದ್ದರಿಂದ ಕಾಲುವೆ ಅಕ್ಕಪಕ್ಕದ ಜಮೀನಿನ ರೈತರಿಗೆ ಉಪಯೋಗವಾಗಲಿ ಎಂದು ಕಾಲುವೆಯನ್ನು ಸರಿಪಡಿಸಲು ಕೈಹಾಕಿದ್ದೆವು. ಇದರಲ್ಲಿ ಯಾರಿಗೂ ವಂಚನೆ ಮಾಡುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *