ರಮ್ಯಾ ಬಗ್ಗೆ ಗೊಂದಲ ಸೃಷ್ಟಿಸಿದೆ ಡಿಕೆಶಿ ಹೇಳಿಕೆ

ಬೆಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ, ಅಂಬರೀಶ್ ಅವರ ಅಂತಿಮ ದರ್ಶನ ಪಡೆಯದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ರಮ್ಯಾ ಅವರು ಕಾಯಿಲೆಯೊಂದರಿಂದ ಬಳಲುತ್ತಿದ್ದ ಪರಿಣಾಮ ಬರಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದ್ದು, ಆದ್ರೆ ಇದೀಗ ಡಿಕೆಶಿ ನೀಡಿದ ಹೇಳಿಕೆ ಗೊಂದಲ ಸೃಷ್ಠಿಸಿದೆ.

ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಅಂಬರೀಶ್ ನಿಧನದ ಸುದ್ದಿಯನ್ನು ರಮ್ಯಾರಿಗೆ ಫೋನ್ ಮಾಡಿ ತಿಳಿಸಿದೆ. ಆಗ ಅವರು, ಅಂಕಲ್ ಕಾಲು ಫ್ರ್ಯಾಕ್ಚರ್ ಆಗಿದೆ. ಅಂತಿಮ ದರ್ಶನ ಪಡೆಯಲು ಬರೋದಕ್ಕೆ ಸಾಧ್ಯವಾಗುತ್ತಿಲ್ಲ ಅಂತ ನಾನು ಫೋನ್ ಮಾಡಿದಾಗ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡರು. ಸದ್ಯ ರಮ್ಯಾ ಜಾರಿ ಬಿದ್ದಿದ್ದರಿಂದ ಒಂದು ಕಡೆಯಿಂದ ಇನ್ನೊಂದು ಕಡೆ ಚಲಿಸಲು ಸಾಧ್ಯವಾಗುತ್ತಿಲ್ಲ ಎಂದು ಡಿಕೆಶಿ ಅವರು ರಮ್ಯಾ ಗೈರಿನ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಇದಕ್ಕೂ ಮೊದಲು ಮಾಜಿ ಸಂಸದೆ ರಮ್ಯಾ ತಾವು ಆಸ್ಟಿಯೋಕ್ಲ್ಯಾಟೋಮಾ (Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ವಿಶ್ರಾಂತಿ ಪಡೆಯುತ್ತಿದ್ದೇನೆ. ಆಸ್ಟಿಯೋಕ್ಲ್ಯಾಸ್ಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್‍ನಿಂದ ವಿಶ್ರಾಂತಿ ಪಡೆಯುತ್ತಿರುವುದಾಗಿ ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಮ್ಯಾ ಅಂಬಿ ಅಂತ್ಯಕ್ರಿಯೆಯಲ್ಲಿ ಗೈರಾಗಿದ್ದಾರೆ ಅನ್ನೋ ವಿಚಾರ ಮಾಧ್ಯಮದಲ್ಲಿ ಬಿತ್ತರವಾಗಿದ್ದು, ಈ ಕುರಿತು ಡಿಕೆಶಿ ಪ್ರತಿಕ್ರಿಯಿಸಿದ್ದರು.

ಸದ್ಯ ಡಿಕೆ ಶಿವಕುಮಾರ್ ಹೇಳಿಕೆ ಗೊಂದಲ ಸೃಷ್ಟಿಸಿದ್ದು, ನಿಜಕ್ಕೂ ರಮ್ಯಾರಿಗೆ ಏನಾಗಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.

ದಿವ್ಯ ಸ್ಪಂದನ ಎಂಬ ಹುಡುಗಿ ಸ್ಯಾಂಡಲ್‍ವುಡ್‍ನಲ್ಲಿ ರಮ್ಯಾ ಆಗಿ ಬೆಳೆಯುವಲ್ಲಿ ಅಂಬಿ ಆಶೀರ್ವಾದವಿತ್ತು. ಅಲ್ಲದೇ ನಟಿಯಾಗಿದ್ದ ರಮ್ಯಾ ಮಂಡ್ಯದಲ್ಲಿ ಗೆದ್ದು ಸಂಸದೆಯಾಗಿದ್ದರು. ಆದರೆ ಅಂಬರೀಶ್ ನಿಧನಕ್ಕೆ ಕೇವಲ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅಂಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಮ್ಯಾಗೆ ಛೀಮಾರಿ ಹಾಕಿದ್ದರು. ಅಲ್ಲದೇ ಮಂಡ್ಯದ ಜನತೆ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *