ಅಂಬಿಯ ದರ್ಶನ ಪಡೆಯಲು ಬರಬಾರದು ಅಂತ ನಿರ್ಧರಿಸಿದ್ದ ಕ್ರೇಜಿಸ್ಟಾರ್

ಬೆಂಗಳೂರು: ಅಂಬರೀಶ್ ಅಂತಿಮ ದರ್ಶನ ಪಡೆಯಲು ಬರಬೇಕೋ ಅಥವಾ ಬೇಡ ಎಂಬ ಗೊಂದಲ ನನ್ನಲ್ಲಿ ಮೂಡಿತ್ತು. ಕೊನೆಗೆ ಮನಸ್ಸು ಕೇಳಲೇ ಇಲ್ಲ. ಇವಾಗ ಅಂಬರೀಶ್ ಅಂತಿಮ ದರ್ಶನ ಪಡೆದಿದ್ದೇನೆ ಎಂದು ನಟ ವಿ. ರವಿಚಂದ್ರನ್ ಭಾನುವಾರ ಹೇಳಿದ್ದರು.

ಅಂಬರೀಶ್ ನಗುಮೊಗ ನನ್ನ ಹೃದಯದಲ್ಲಿದೆ. ಹಾಗಾಗಿ ಅದೇ ಮುಖ ನನ್ನ ಜೀವನದಲ್ಲಿ ಇರಲಿ. ಪಾರ್ಥಿವ ಶರೀರ ನೋಡಿದ್ರೆ ಅದು ಎಲ್ಲಿ ನೆನಪು ಆಗುತ್ತೆ ಅಂತಾ ದೂರ ಉಳಿದುಕೊಂಡಿದ್ದೆ. ಇಬ್ಬರದು ಬರ್ತ್ ಡೇ ಒಂದು ದಿನ ಹಿಂದೆ ಮುಂದೆ ಬರುತ್ತೆ, ಅಭಿಮಾನಿಗಳು ಇಬ್ಬರ ಹುಟ್ಟುಹಬ್ಬವನ್ನು ಜೊತೆಯಾಗಿ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದರು, ಮುಂದೆ ಪ್ರತಿ ವರ್ಷವು ನನಗೆ ಹುಟ್ಟು ಹಬ್ಬದಂದು ಅಂಬಿಯ ಕೊರತೆ ಕಾಣುತ್ತದೆ ಎಂದು ಹೇಳಿ ರವಿಚಂದ್ರನ್ ಭಾವುಕರಾದರು.

ಅಂಬರೀಶ್ ಮುಖದಲ್ಲಿ ನಾನೆಂದು ನೋವನ್ನ ಕಂಡಿಲ್ಲ. ಒಂದು ಇಂಜೆಕ್ಷನ್ ಅಂದ್ರೆ ಓಡಿ ಹೋಗುವಂತಹ ವ್ಯಕ್ತಿ. ಚಕ್ರವ್ಯೂಹ ಸಿನಿಮಾ ಚಿತ್ರೀಕರಣದಲ್ಲಿ ಗಾಯಗೊಂಡಿದ್ದ ಅಂಬಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇಂಜೆಕ್ಷನ್ ನೋಡುತ್ತಲೇ ಆಸ್ಪತ್ರೆಯಿಂದ ಹೊರ ಬಂದಿದ್ದರು. ಅಂದು ಇಂಜೆಕ್ಷನ್ ಮಾಡಿಸಿಕೊಳ್ಳಲು ಹೆದರುತ್ತಿದ್ದ ವ್ಯಕ್ತಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುತ್ತಿದ್ದರು. ಬದುಕು ಎಲ್ಲವನ್ನ ಕಲಿಸುತ್ತದೆ ಮತ್ತು ಧೈರ್ಯವನ್ನು ಕೊಡುತ್ತದೆ ಅಲ್ವಾ ಅಂತ ಅಂದರು.

ಮೇ 29ರಂದು ಅಂಬರೀಶ್ ಹುಟ್ಟು ಹಬ್ಬವನ್ನು ಅಭಿಮಾನಿಗಳು ಅತ್ಯಂತ ಸಡಗರದಿಂದ ಆಚರಣೆ ಮಾಡುತ್ತಿದ್ದರು. ಮರುದಿನ ಅಂದರೆ ಮೇ 30ರಂದು ರವಿಚಂದ್ರನ್ ಹುಟ್ಟುಹಬ್ಬದಲ್ಲಿಯೂ ಅಭಿಮಾನಿಗಳು ಭಾಗಿಯಾಗುತ್ತಿದ್ದರು. ಬ್ರಹ್ಮ ವಿಷ್ಣು ಮಹೇಶ್ವರ, ರಾಮಣ್ಣ ಶಾಮಣ್ಣ ನಾನೇ ರಾಜ, ಖದೀಮ ಕಳ್ಳರು ಮತ್ತು ಪ್ರೇಮಲೋಕ ಸಿನಿಮಾಗಳಲ್ಲಿ ಅಂಬಿ-ರವಿಚಂದ್ರನ್ ಜೊತೆಯಾಗಿ ನಟಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *