ಗುಂಡು ತಗುಲಿದ್ರೂ ಬಂದು ತಾಳಿ ಕಟ್ಟಿದ ಗಂಡೆದೆ ಗುಂಡಿಗೆಯ ವರ!

ನವದೆಹಲಿ: ಮದುವೆ ಮೆರವಣಿಯ ವೇಳೆ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರೂ ಅದನ್ನು ಲೆಕ್ಕಿಸದೇ ಮಂಟಪಕ್ಕೆ ಆಗಮಿಸಿ ವರ ಮದುವೆಯಾಗಿರುವ ಘಟನೆ ದೆಹಲಿಯ ಮಡಂಗೀರ್ ಪ್ರದೇಶದಲ್ಲಿ ನಡೆದಿದೆ.

26 ವರ್ಷದ ಬಾದಲ್ ಗುಂಡಿನ ದಾಳಿಗೆ ಒಳಗಾದ ವರನಾಗಿದ್ದು, ಮದುವೆ ಮಂಟಪಕ್ಕೆ ಬಂದು ಮಿತ್ರರೊಂದಿಗೆ ಮೆರವಣಿಗೆಯಲ್ಲಿ ಆಗಮಿಸುವ ವೇಳೆ ಆತನ ಮೇಲೆ ಗುಂಡಿನ ದಾಳಿ ನಡೆದಿತ್ತು.

ನಡೆದಿದ್ದೇನು: ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಕಾನ್ಪುರದಿಂದ ಮದುವೆ ಮಂಟಪದತ್ತ ಆಗಮಿಸುತ್ತಿದ್ದರು. ಆದರೆ ಮಂಟಪದ 500 ಮೀಟರ್ ಮೊದಲೇ ಮೆರವಣಿಗೆ ಆಗಮಿಸಿದ ವೇಳೆ ಕೆಲ ದುಷ್ಕರ್ಮಿಗಳು ವರನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದರು. ಇದರಲ್ಲಿ ಒಂದು ಗುಂಡು ಬಾದಲ್ ಬಲ ಭುಜಕ್ಕೆ ತಾಗಿತ್ತು. ಕೂಡಲೇ ಎಚ್ಚೆತ್ತ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಸತತ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಾದಲ್ ಬಳಿಕ ಆಸ್ಪತ್ರೆಯಿಂದ ನೇರ ಮಂಟಪ್ಪಕ್ಕೆ ಆಗಮಿಸಿ ಮದುವೆ ಕಾರ್ಯ ಮುಗಿಸಿದ್ದಾನೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, ಘಟನೆ ವೇಳೆ ಆರೋಪಿಗಳು ಮದುವೆ ಮೆರವಣಿಯೊಂದಿಗೆ ಆಗಮಿಸಿ ವರನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆದರೆ ದಾಳಿ ನಡೆಸಿದ್ದು ಯಾರು ಎನ್ನುವುದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಸದ್ಯ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *