ಮನೆಯ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ- ನಟಿ ರಶ್ಮಿ ಮೇಲೆ ಮೂಡಿದೆ ಅನುಮಾನ

ಬೆಂಗಳೂರು: ಮನೆ ಮೇಲಿನಿಂದ ಬಿದ್ದು ಯುವಕ ಸಾವನ್ನಪ್ಪಿದ ಪ್ರಕರಣದಲ್ಲಿ ಈಗ ದುನಿಯಾ ಸಿನಿಮಾ ನಟಿ ರಶ್ಮಿ ಹೆಸರು ತಳಕು ಹಾಕಿಕೊಂಡಿದೆ. ಅದು ಆತ್ಮಹತ್ಯೆಯೋ? ಆಕಸ್ಮಿಕ ಸಾವೋ? ಕೊಲೆಯೋ ನಿಟ್ಟಿನಲ್ಲಿ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

ಕಳೆದ ಭಾನುವಾರ ರಾತ್ರಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಡಿ ಬ್ಲಾಕ್‍ನಲ್ಲಿರುವ ರಶ್ಮಿ ಮನೆಗೆ ಬಂದಿದ್ದ ಫೋಟೋಗ್ರಾಫರ್ ಪ್ರತೀಕ್, ರಾತ್ರಿ ಸುಮಾರು 11.30 ಕ್ಕೆ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದನು. ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಿದ್ದಿದ್ದಾನೆ ಎಂದು ದುನಿಯಾ ರಶ್ಮಿ ಹೇಳಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡ ಅನ್ನಪೂರ್ಣೇಶ್ವರಿನಗರ ಪೊಲೀಸರಿಗೆ ದುನಿಯಾ ರಶ್ಮಿಗೂ ಈ ಸಾವಿಗೂ ಏನಾದರೂ ಸಂಬಂಧ ಇದೆಯೇ ಎನ್ನುವ ಅನುಮಾನ ಮೂಡಿದೆ. ಇದನ್ನೂ ಓದಿ:  ದುನಿಯಾ ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವು

ಅನುಮಾನ ಯಾಕೆ?
ಸಾವನ್ನಪ್ಪಿದ ಪ್ರತೀಕ್ ಮತ್ತು ರಶ್ಮಿ ಹಲವು ವರ್ಷಗಳಿಂದ ಸ್ನೇಹಿತರು. ಹೀಗಾಗಿ ಇವರಿಬ್ಬರ ಮಧ್ಯೆ ಪ್ರೀತಿ, ಪ್ರೇಮ ಏನಾದರೂ ಇದೆಯೇ? ಈ ಕಾರಣಕ್ಕೆ ಗಲಾಟೆ ನಡೆದು ಪ್ರತೀಕ್ ಕೆಳಗೆ ಬಿದ್ದು ಮೃತಪಟ್ಟಿದ್ದಾನಾ ಎನ್ನುವ ಅನುಮಾನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಶ್ಮಿ ಅವರ ಮೊಬೈಲ್‍ನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‍ಎಸ್‍ಎಲ್) ಕಳುಹಿಸಲಾಗಿದೆ.

ಮತ್ತೊಂದು ಶಾಕಿಂಗ್ ವಿಚಾರ ಎಂದರೆ ಪ್ರತೀಕ್ ಮನೆ ಮೇಲಿಂದ ಬಿದ್ದ ಕೆಲವೇ ಸೆಕೆಂಡ್‍ಗಳಲ್ಲಿ ಎದುರು ಮನೆಯ ಯುವತಿಯೊಬ್ಬರು ಮೊದಲ ಹಂತದಿಂದ ಕೆಳಗೆ ಬಿದ್ದಿದ್ದಾರೆ. ಸದ್ಯ ಆ ಯುವತಿ ಬಿಜಿಎಸ್ ಆಸ್ಪತ್ರೆಯ ಐಸಿಯೂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಇನ್ನು ಆಕೆಯಿಂದ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಅಂದು ರಾತ್ರಿ ಎದುರು ಮನೆಯ ಯುವತಿ ಪ್ರತೀಕ್ ಕೆಳಗೆ ಬಿಳೋದು ನೋಡಿದ್ಲಾ? ಅಥವಾ ಆ ಯುವತಿ ಮತ್ತು ಪ್ರತೀಕ್ ಮಧ್ಯೆ ಏನಾದರೂ ನಡೆದಿತ್ತಾ ಎನ್ನುವ ಅನುಮಾನ ಮೂಡಿದ್ದು ಸದ್ಯ ಆ ಯುವತಿ ಮೊಬೈಲನ್ನು ಕೂಡ ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿದೆ.

ರಶ್ಮಿ ಕುಟುಂಬಸ್ಥರು, ಪ್ರತೀಕ್ ಮತ್ತು ಅರುಣ್ ತಡರಾತ್ರಿವರೆಗೂ ಕುಡಿದಿದ್ದಾರೆ. ಆ ಮತ್ತಿನಲ್ಲಿ ಪ್ರತೀಕ್ ಕಾಲು ಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಎಫ್‍ಎಸ್‍ಎಲ್ ವರದಿ ಬಂದ ನಂತರವಷ್ಟೇ ಪ್ರತೀಕ್ ಸಾವಿನ ರಹಸ್ಯ ಪತ್ತೆಯಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *