ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ

ಬೆಂಗಳೂರು: ಬಸ್ ದರ 18% ಹೆಚ್ಚಳ ಆಗಬೇಕೆಂದು ಸಿಎಂ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

ಸಿಎಂ ಜೊತೆಗೆ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಸ್ ದರ ಹೆಚ್ಚಳದ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಡಿಸೇಲ್ ವಾಹನಗಳನ್ನು ಕಡಿಮೆ ಮಾಡಿ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ ಓಡಿಸಲು ಚಿಂತನೆ ನಡೆದಿದೆ. ಕೇಂದ್ರ ಸರ್ಕಾರ 80 ಬಸ್ಸುಗಳನ್ನು ನೀಡುತ್ತಿದ್ದು, ಮತ್ತಷ್ಟು ಬಸ್ಸಿನ ವ್ಯವಸ್ಥೆಯನ್ನು ಕೇಳುತ್ತಿದ್ದೇವೆ ಎಂದು ತಿಳಿಸಿದರು.

ಮಂಡ್ಯ ಲೋಕಸಭಾ ಉಪಚುನಾವಣೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಮಗನಿಗೆ ಮಂಡ್ಯದಲ್ಲಿ ಟಿಕೆಟ್ ಕೇಳಿಲ್ಲ. ಲೋಕಸಭೆ ಆಕಾಂಕ್ಷಿಯೂ ಅಲ್ಲ. ಸಚಿವ ಪುಟ್ಟರಾಜು ಹಾಗೂ ಮಾಜಿ ಸಚಿವ ಚೆಲುವರಾಯಸ್ವಾಮಿ ಕಿತ್ತಾಟ ಮೊದಲಿನಿಂದಲೂ ನಡೆಯುತ್ತಲೇ ಇದೆ. ಇಬ್ಬರ ನಡುವಿನ ಕಿತ್ತಾಟ ಈಗಲೂ ಇದೆ. ಇದೇನು ಹೊಸತಲ್ಲ ಎಂದರು.

ಪ್ರತಿ ಲೀಟರ್ ಡೀಸೆಲ್ ಬೆಲೆ 2.50 ರೂಪಾಯಿ ಇಳಿಕೆಯಾಗಿದ್ದು, ಕುಮಾರಸ್ವಾಮಿ ಸರ್ಕಾರ ತೈಲ ಬೆಲೆ ಇಳಿಸದೇ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈಗ ಪ್ರಯಾಣ ದರ ಹೆಚ್ಚಿಸಿದರೆ ಮತ್ತೆ ಜನರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡದೇ ಇರಲು ಸರ್ಕಾರ ನಿರ್ಧಾರ ಮಾಡಿದೆ ಎನ್ನುವ ಸುದ್ದಿಯನ್ನು ಅಕ್ಟೋಬರ್ 5 ರಂದೇ ಪಬ್ಲಿಕ್ ಟಿವಿ ಪ್ರಕಟಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *