ಸ್ಕೂಟರಿನಲ್ಲಿ ಹೋಗ್ತಿದ್ದ ವೈದ್ಯೆಗೆ ಮೃತ್ಯುವಾದ ಗಾಳಿಪಟ!

ಮುಂಬೈ: 26 ವರ್ಷದ ವೈದ್ಯೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಗಾಳಿಪಟ ದಾರ ಬಂದು ಕುತ್ತಿಗೆಗೆ ಸಿಕ್ಕಿ ಹಾಕಿಕೊಂಡ ಪರಿಣಾಮ ವೈದ್ಯೆ ದಾರುಣವಾಗಿ ಮೃತಪಟ್ಟಿರುವ ಘಟನೆ ಪುಣೆಯ ಬೋಸಾರಿ ಪ್ರದೇಶದಲ್ಲಿ ನಡೆದಿದೆ.

ಡಾ. ಕೃಪಾಲಿ ನಿಕ್ಕಂ ಮೃತ ವೈದ್ಯೆ. ಇವರು ಭಾನುವಾರ ಸ್ಕೂಟರ್ ನಲ್ಲಿ ಪುಣೆಯಿಂದ ಬೋಸಾರಿ ಪ್ರದೇಶಕ್ಕೆ ತೆರಳುತ್ತಿದ್ದರು. ನಾಶಿಕ್ ಪ್ಲೈಓವರ್ ಮೇಲೆ ಹೋಗುತ್ತಿದ್ದ ವೇಳೆ ಗಾಳಿಪಟ ಹಾರಿಸುತ್ತಿದ್ದ ದಾರ ಬಂದು ಅವರ ಕೊರಳಲ್ಲಿ ಸುತ್ತಿಕೊಂಡಿದೆ.

ಪರಿಣಾಮ ವೈದ್ಯೆ  ನಿಯಂತ್ರಣ ತಪ್ಪಿ ಫ್ಲೈಓವರ್ ನಿಂದ ಕೆಳಗೆ ಬಿದ್ದಿದ್ದಾರೆ. ಗಾಳಿಪಟ್ದ ದಾರ ಅವರ ಕುತ್ತಿಗೆಯನ್ನು ಬಿಗಿಯಾಗಿ ಸುತ್ತಿಕೊಂಡಿದ್ದರಿಂದ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾಗಿದೆ. ತಕ್ಷಣ ಅವರನ್ನು ಸ್ಥಳದಲ್ಲಿದ್ದವರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅತಿಯಾದ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಅಂತ ಇನ್ಸ್ ಪೆಕ್ಟರ್ ಸುನಿಲ್ ಗಾಡೆ ಅವರು ತಿಳಿಸಿದ್ದಾರೆ.

ವೈದ್ಯೆ ಇದ್ದಕ್ಕಿದ್ದಂತೆಯೇ ಸ್ಕೂಟರ್ ನಿಂದ ಕೆಳಗೆ ಬಿದ್ದರು. ನಾನು ಹತ್ತಿರ ಹೋದಾಗ ಅವರು ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಆದರೆ ಗಾಳಿಪಟ ದಾರದಿಂದ ಕುತ್ತಿಗೆ ಕಟ್ ಆಗಿದ್ದರಿಂದ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಮೃತ ವೈದ್ಯೆ ಪಿಂಪ್ಲಿ ಸೌದಾಗರ್ ಪ್ರದೇಶದ ನಿವಾಸಿ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *