ಮೈಸೂರು: ಚಾಮುಂಡಿ ಬೆಟ್ಟದ ಮೇಲಿರುವ ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ಕೆಡವಿ ಹಾಕಿ, ಬೌದ್ಧ ಭಿಕ್ಕು ಮಹಿಷಾಸುರ ರೂಪದ ವಿಗ್ರಹ ನಿರ್ಮಿಸುವಂತೆ ಪ್ರೊ.ಕೆ.ಎಸ್ ಭಗವಾನ್ ಆಗ್ರಹಿಸಿದ್ದಾರೆ.
ನಗರದಲ್ಲಿ ನಡೆದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಷಾಸುರ ರಾಕ್ಷಸನಲ್ಲ, ಆತ ರಾಕ್ಷಸನಾಗಿದ್ದರೆ ಅವನ ಹೆಸರನ್ನೇ ಮೈಸೂರಿಗೆ ಏಕೆ ಇಡುತ್ತಿದ್ದರು? ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಇದ್ದವನು. ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ ಎಂದು ಭಾವಿಸಬೇಕು. ಆದರೆ ಪುರೋಹಿತಶಾಹಿಗಳ ಮಾತು ಕೇಳಿ 1950ರಲ್ಲಿ ಜಯಚಾಮರಾಜ ಒಡೆಯರ್ ಅವರು ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ನಿರ್ಮಾಣ ಮಾಡಿಸಿದರು ಎಂದು ಆರೋಪಿಸಿದರು.

ಈ ಕೂಡಲೇ ಆ ವಿಗ್ರಹವನ್ನು ತೆಗೆದು ಬೌದ್ದ ಭಿಕ್ಕು ರೂಪದ ಮಹಿಷಾಸುರನ ವಿಗ್ರಹ ಸ್ಥಾಪನೆ ಮಾಡಬೇಕು. ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಒಂದು ವೇಳೆ ಸರ್ಕಾರ ಈ ಕ್ರಮಕ್ಕೆ ಮುಂದಾಗದಿದ್ದರೆ, ಕಾನೂನು ಹೋರಾಟ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಪ್ರಾಚೀನ ಅಸುರ ರಾಷ್ಟ್ರ ಎನ್ನುವ ಪುಸ್ತಕದಲ್ಲೂ ಮಹಿಷಾಸುರನ ಬಗ್ಗೆ ಉಲ್ಲೇಖವಿದೆ. ನಿಜವಾದ ರಾಕ್ಷಸರು ಪುರೋಹಿತಶಾಹಿಗಳೇ ಹೊರತು ಮಹಿಷಾಸುರನಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಈ ತಿಂಗಳ 7 ರಂದು ಮಹಿಷಾ ದಸರಾ ಆಚರಣೆ ಮಾಡುತ್ತಿದ್ದು, ಎಲ್ಲರೂ ಭಾಗವಹಿಸಬೇಕು ಎಂದು ಪ್ರೊ.ಕೆ.ಎಸ್.ಭಗವಾನ್ ಮನವಿ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply