ರೈತನಿಂದ ಸಾಲ ವಸೂಲಾತಿಗಾಗಿ ಕೋರ್ಟ್ ಮೆಟ್ಟಿಲೇರಿದ ಬ್ಯಾಂಕ್!

ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ ನೋಟಿಸ್ ನೀಡಬೇಡಿ ಎಂದು ಖಡಕ್ ಸೂಚನೆ ನೀಡಿದ್ದರೂ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಕೋರ್ಟ್ ಮುಖಾಂತರ ರೈತನಿಗೆ ನೋಟಿಸ್ ನೀಡಿದೆ.

ಪಾಂಡವಪುರ ತಾಲೂಕಿನ, ಮೇನಾಗರ ಗ್ರಾಮದ ರೈತ ಜವರೇಗೌಡರಿಗೆ ಕೋರ್ಟ್ ನೋಟಿಸ್ ನೀಡಿದ್ದು, ಅಕ್ಟೋಬರ್ 5 ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಎಸ್‍ಬಿಎಂ ಬ್ಯಾಂಕ್, ಬೆಳ್ಳಾಳೆ ಬ್ರಾಂಚ್‍ನವರು ನಿಮ್ಮ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ನೀವು ನಿಮ್ಮ ವಕೀಲರ ಮೂಲಕ ಕೋರ್ಟ್‌ಗೆ ಹಾಜರಾಗುವಂತೆ ನೋಟಿಸ್ ನಲ್ಲಿ ಉಲ್ಲೇಖವಾಗಿದೆ.

ರೈತ ಜವರೇಗೌಡ 1.30 ಲಕ್ಷ ರೂ. ಬೆಳೆ ಸಾಲ ಮಾಡಿದ್ದರು. 2007 ಮತ್ತು 2009ರಲ್ಲಿ ಸತತ ಬರಗಾಲದಿಂದ ಸರಿಯಾಗಿ ಬೆಳೆಯಾಗದೇ ಸಾಲ ತೀರಿಸಲು ಸಾಧ್ಯವಾಗಿಲ್ಲ. ಸಾಲ ತೀರಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ಈಗ ಕೋರ್ಟ್ ಮೂಲಕ ವಸೂಲು ಮಾಡಲು ಮುಂದಾಗಿದೆ.

ನೋಟಿಸ್ ಬಗ್ಗೆ ರೈತ ಜವರೇಗೌಡ ಪ್ರತಿಕ್ರಿಯಿಸಿ, ನನಗೆ ಹೃದಯ ಸಂಬಂಧಿ ಕಾಯಿಲೆಯಿದ್ದು, ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕುಮಾರಸ್ವಾಮಿ ಅವರು ನೋಟಿಸ್ ನೀಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇತ್ತ ನೋಟಿಸ್ ನೀಡಿದರೆ ನಾವು ಬದುಕಬೇಕೇ ಅಥವಾ ಇಲ್ಲ ಸಾಯಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ.

ನೋಟಿಸ್ ಗಳು ಈಗ ಯಾಕೆ ಬರುತ್ತದೆ ಎನ್ನುವ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಒಬ್ಬರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಸಾಲ ಮನ್ನಾ ಘೋಷಣೆ ಮಾಡಿದ್ದು ಕಳೆದ ವಾರವಷ್ಟೇ ನೋಟಿಸ್ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆದರೆ ನೋಟಿಸ್ ಗಳು ಕೆಲ ದಿನಗಳ ಹಿಂದೆಯೇ ರವಾನೆಯಾಗಿದ್ದು ಈಗ ರೈತರ ಕೈಗೆ ತಲುಪುತ್ತಿವೆ ಎಂದು ತಿಳಿಸಿದ್ದಾರೆ.

ಸಿಎಂ ಹೇಳಿದ್ದು ಏನು?
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾಡಳಿತದಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ, ಸಾಲ ನೀಡಿದ ಬ್ಯಾಂಕಿನವರು ಸಾಲ ತೀರಿಸುವಂತೆ ಒತ್ತಡ ಹೇರಿ ನೋಟಿಸ್ ಜಾರಿ ಮಾಡಿದರೆ ಅಂಥಹ ಬ್ಯಾಂಕ್ ಮ್ಯಾನೇಜರ್ ಅನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *