ದೂರು ನೀಡಲು ಬಂದ ಗ್ರಾ.ಪಂ ಅಧ್ಯಕ್ಷೆ, ಸದಸ್ಯರಿಗೆ ಠಾಣೆಯಲ್ಲೇ ಕೂಡಿ ಹಾಕಿ ಥಳಿತ!

ಶಿವಮೊಗ್ಗ: ದೂರು ನೀಡಲು ಬಂದಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಸದಸ್ಯರನ್ನು ಠಾಣೆಯಲ್ಲಿ ಕೂಡಿ ಹಾಕಿ ಥಳಿಸಿದ ಘಟನೆ ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪಿಎಸ್‍ಐ ನೂರ್ ಅಹಮ್ಮದ್ ಹಾಗೂ ರಾತ್ರಿ ಪಾಳಿ ಡ್ಯೂಟಿಯಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್‍ಸ್ಟೇಬಲ್ ಸುರೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಭಿನವ್ ಖರೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ತಾಲೂಕು ಮೇಲಿನ ಹನಸವಾಡಿ ಗ್ರಾ.ಪಂ ಪಿಡಿಓ ಸ್ಟ್ಯಾನ್ಲಿ ಫರ್ನಾಂಡಿಸ್ ಹಾಗೂ ಅಧ್ಯಕ್ಷೆ ರತ್ನ ಮತ್ತು ಕೆಲ ಸದಸ್ಯರ ನಡುವೆ ವೈಮನಸ್ಯ ಆರಂಭವಾಗಿತ್ತು. ಈ ಹಿನ್ನಲೆಯಲ್ಲಿ ಪಿಡಿಓ ವಿರುದ್ಧ ದೂರು ನೀಡಲು ಹೋದಾಗ ಅವರನ್ನು ರಾತ್ರಿವರೆಗೂ ಕಾಯಿಸಿ, ನಾಳೆ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಅವರು ಧಿಕ್ಕಾರ ಕೂಗಿದ್ದಾರೆ.

ಕೋಪಗೊಂಡ ಪಿಎಸ್‍ಐ ನೂರ್ ಅಹಮ್ಮದ್ ಎಲ್ಲರನ್ನೂ ಒಳಗಡೆ ಹಾಕಿ ಹಲ್ಲೆ ನಡೆಸಿದ್ದರು. ಹಲ್ಲೆ ಬಗ್ಗೆ ಗ್ರಾಮದಲ್ಲಿ ಸುಳ್ಳು ಸುದ್ದಿಗಳು ಹರಡಿದ್ದರಿಂದ ರತ್ನ ಅವರಿಗೆ ಅಪಮಾನವಾಗಿದೆ. ಇದರಿಂದ ತೀವ್ರವಾಗಿ ನೊಂದ ರತ್ನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಸ್ಪಿ ಅಭಿನವ್ ಖರೆ ಗ್ರಾಮಾಂತರ ಠಾಣೆ ಪಿಎಸ್‍ಐ ನೂರ್ ಅಹಮ್ಮದ್ ಅವರನ್ನು ಅಮಾನತು ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *