ಮೂಲಸೌಕರ್ಯಗಳಿಂದ ವಂಚಿತರಾಗಿರೋ ತಾಂಡಾ ಜನತೆಯ ಬಾಳಲ್ಲಿ ಮೂಡಬೇಕಿದೆ ‘ಬೆಳಕು’

ರಾಯಚೂರು: ನಗರ, ಪಟ್ಟಣ ಪ್ರದೇಶಗಳ ಮಿತಿ ಮೀರಿದ ನಾಗರೀಕತೆ ಮಧ್ಯೆಯೇ ಕನಿಷ್ಠ ತಾಲೂಕು ಕೇಂದ್ರವನ್ನೇ ನೋಡದ ಜನರಿರುವ ಗ್ರಾಮಗಳೂ ಇವೆ ಅಂದ್ರೆ ನಂಬಲೇ ಬೇಕು. ರಾಯಚೂರಿನ ದೇವದುರ್ಗ ತಾಲೂಕಿನ ಕೆಲ ಗ್ರಾಮಗಳು ರಸ್ತೆ ಇಲ್ಲದೆ ನಗರ ಪ್ರದೇಶದಿಂದ ದೂರ ಉಳಿದಿವೆ. ಹಲವಾರು ಸಮಸ್ಯೆಗಳ ಮಧ್ಯೆ ವೃದ್ಧರೇ ಹೆಚ್ಚಾಗಿ ಇಲ್ಲಿ ಬದುಕುತ್ತಿದ್ದಾರೆ. ಈ ಜನರ ಕಷ್ಟಗಳ ನಿವಾರಣೆಗೆ ಸಣ್ಣದೊಂದು ಬೆಳಕಿನ ಅವಶ್ಯಕತೆಯಿದೆ.

ಸುಮಾರು 40-50 ವರ್ಷಗಳ ಹಿಂದೆ ಹುಟ್ಟಿಕೊಂಡ ದೇವದುರ್ಗದ ಪೂಜಾರಿ ತಾಂಡ, ತೋಳದಕೇರಿ ತಾಂಡ, ಬಾರೆಗಿಡ ತಾಂಡಗಳು ರಾಯಚೂರು ಜಿಲ್ಲೆಯಲ್ಲಿವೆ. ಮೂರು ತಾಂಡಗಳಲ್ಲಿ ಸುಮಾರು 75 ಮನೆಗಳಿವೆ. 250 ಜನ ಮತದಾರರಿದ್ದು, ಒಟ್ಟು 350 ಜನ ವಾಸವಾಗಿದ್ದಾರೆ. ಕುಡಿಯಲು ನೀರಿಲ್ಲ, ಜೀವನ ಮಾಡಲು ಸರಿಯಾದ ಸೂರಿಲ್ಲ. ಓಡಾಡಲು ರಸ್ತೆ ಮಾರ್ಗವಿಲ್ಲ. ವಿದ್ಯುತ್ ಸಂಪರ್ಕ ಇಲ್ಲದೇ ಮೂಲಸೌಕರ್ಯಗಳಿಂದ ವಂಚಿತರಾಗಿ ಅಂಗೈಯಲ್ಲಿ ಜೀವ ಹಿಡಿದು ಬದುಕು ಸಾಗಿಸುತ್ತಿದ್ದಾರೆ.

ತಾಂಡದಲ್ಲಿರುವವರು ಹಿರಿಯರು ವ್ಯವಸಾಯ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಯುವಕರು ತಾಂಡದ ಪರಿಸ್ಥಿತಿಯನ್ನು ಕಂಡು ಪೂನಾ ಸೇರಿದಂತೆ ನಗರ ಪ್ರದೇಶಗಳಿಗೆ ಕೆಲಸಕ್ಕಾಗಿ ಗುಳೆ ಹೋಗಿದ್ದಾರೆ. ಆರೋಗ್ಯ ಹದಗೆಟ್ಟರೆ ಹತ್ತಿರದಲ್ಲಿ ಆಸ್ಪತ್ರೆ ಇಲ್ಲ. 10 ಕೀಲೋ ಮೀಟರ್ ನಡೆಯಬೇಕು. ಹೀಗೆ ಅನಾರೋಗ್ಯಕ್ಕೆ ಆಸ್ಪತ್ರೆಗೆ ಸಾಗಿಸುವ ಮುನ್ನ ಸಾವನ್ನಪಿದ್ದಾರೆ. ಊರಿಗೆ ರಸ್ತೆ ಇಲ್ಲ. ಸಾರಿಗೆ ವ್ಯವಸ್ಥೆ ಇಲ್ಲ. ಆದ್ರೆ ಮೂರು ತಾಂಡಗಳಿಗೆ ನಿತ್ಯದ ಕಾರ್ಯ ವಸ್ತು ಖರೀದಿಗೆ 1 ಬೈಕ್ ಆಸರೆಯಾಗಿದೆ. ಬೈಕ್ ಕೈ ಕೊಟ್ಟರೆ ಇವರು ಪರಿಸ್ಥಿತಿ ನಿಜಕ್ಕೂ ದುಸ್ಥರ.

350 ಮಂದಿ ವಾಸ ಮಾಡುತ್ತಿರುವ ಈ ತಾಂಡಗಳಿಗೆ ಸದ್ಯ ಶುದ್ಧ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ, ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ಮುಂದುವರಿಯಬೇಕಾಗಿದೆ. ಮೂಲಭೂತ ಸೌಕರ್ಯಕ್ಕಾಗಿ ಮೂರು ತಾಂಡದವರು ನಿರೀಕ್ಷೆಯಲ್ಲಿದ್ದಾರೆ.

ಒಟ್ಟಾರೆ ಮೂಲಸೌಕರ್ಯ ಇಲ್ಲದೇ ಬದುಕು ಸಾಗಿಸುತ್ತಿರುವ ಈ ಗ್ರಾಮಸ್ಥರಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಕೂಡ ಕೂಡಲೇ ಎಚ್ಚೆತ್ತು ಕೊಳ್ಳಬೇಕಿದೆ. ಈ ಮೂರು ತಾಂಡಗಳಿಗೆ ಕುಡಿಯುವ ನೀರು, ವಿದ್ಯುತ್ ಅವಶ್ಯಕವಾಗಿ ಬೇಕಾಗಿದ್ದು ತಾಂಡದ ಜನರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

https://www.youtube.com/watch?v=iyFPvxZli64

Comments

Leave a Reply

Your email address will not be published. Required fields are marked *