ಗೋವಾದಲ್ಲಿ ಟಿಪ್ಪರ್ ಕದ್ದು ಉತ್ತರ ಕರ್ನಾಟಕದಲ್ಲಿ ಮಾರಾಟ ಮಾಡ್ತಿದ್ದ!

– ಕಳ್ಳನ ಬಂಧನ, 60 ಲಕ್ಷ ರೂ. ಮೌಲ್ಯದ 4 ಟಿಪ್ಪರ್ ಪೊಲೀಸ್ ವಶಕ್ಕೆ

ಹುಬ್ಬಳ್ಳಿ: ಗೋವಾ ರಾಜ್ಯದಿಂದ ಟಿಪ್ಪರ್ ಕಳ್ಳತನ ಮಾಡಿ, ಉತ್ತರ ಕರ್ನಾಟಕದಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧಿಸಿದ್ದು, ಸುಮಾರು 60 ಲಕ್ಷ ರೂ. ಮೌಲ್ಯದ ನಾಲ್ಕು ಟಿಪ್ಪರ್ ವಶಕ್ಕೆ ಪಡೆದುಕೊಂಡಿದ್ದಾರೆ.

ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ ಗ್ರಾಮದ ನಿವಾಸಿ ಲಕ್ಷ್ಮಣ ಬಂಡಿವಡ್ಡರ್ ಬಂಧಿತ ಆರೋಪಿ. ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದ ಲಕ್ಷ್ಮಣ ಆಗಾಗ ಗೋವಾಕ್ಕೆ ಹೋಗುತ್ತಿದ್ದ. ಅಲ್ಲಿ ನಿಲ್ಲಿಸಿದ್ದ ಟಿಪ್ಪರ್ ಕಳ್ಳತನ ಮಾಡಿ, ರಾಜ್ಯಕ್ಕೆ ತರುತ್ತಿದ್ದ. ರಾಜ್ಯಕ್ಕೆ ಟಿಪ್ಪರ್ ತರುತ್ತಿದ್ದಂತೆ ಚಾಸ್ಸಿ ಬದಲಾಯಿಸಿ, ಕಡಿಮೆ ಬೆಲೆಗೆ ಮಾರುತ್ತಿದ್ದ. ಹೀಗೆ ಗ್ರಾಹಕರೊಬ್ಬರಿಗೆ ಟಿಪ್ಪರ್ ಮಾರಾಟ ಮಾಡುವಾಗ ಚಾಸ್ಸಿ ಬದಲಾಗಿರುವುದನ್ನು ಗಮನಿಸಿ, ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲಿಂದ ಮರಳಿದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸೂಕ್ತ ಮಾಹಿತಿ ಕಲೆಹಾಕಿ, ಹುಬ್ಬಳ್ಳಿ ಉಪ ನಗರ ಪೊಲೀಸರು ಲಕ್ಷ್ಮಣನನ್ನು ಬಂಧಿಸಿ, ವಿಚಾರಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 60 ಲಕ್ಷ ರೂ. ಮೌಲ್ಯದ ನಾಲ್ಕು ಟಿಪ್ಪರ್ ವಶಕ್ಕೆ ಪಡೆದು, ಮಾಲೀಕರು ಯಾರು ಅಂತಾ ಪತ್ತೆ ಹಚ್ಚುವ ಕಾರ್ಯ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *