ನನ್ನ ಹೆಂಡ್ತಿ ನನಗೆ ಬೈತಾಳೆ, ಸಿಎಂ ಮಾಡಿದ್ದು ಅನ್ಯಾಯ, ಮೈಸೂರು, ರಾಮನಗರಗಳಿಗೆ ಮಾತ್ರ ಸೀರೆ ಯಾಕೆ?

ಚಿಕ್ಕಬಳ್ಳಾಪುರ: “ಸರ್ ಗೌರಿ ಗಣೇಶ ಹಬ್ಬಕ್ಕೆ ಕಡಿಮೆ ರೇಟ್‍ಗೆ ರೇಷ್ಮೆ ಸೀರೆ ಕೊಡ್ತಾರಲ್ಲ. ಚಿಕ್ಕಬಳ್ಳಾಪುರದಲ್ಲಿ ಎಲ್ಲಿ ಕೊಡ್ತಾರೆ ಸರ್? ನನ್ನ ಹೆಂಡತಿ ಬಿಡ್ತಾ ಇಲ್ಲ ಸರ್ ಸೀರೆ ಬೇಕೇ ಬೇಕು ಅಂತ ತಲೆ ತಿಂತಾವಳೆ. ಕಡಿಮೆ ಬೆಲೆಗೆ ರೇಷ್ಮೆ ಸೀರೆ ನಮ್ಮ ಜಿಲ್ಲೆಗೂ ನೀಡಿದ್ದರೇ ಕುಮಾರಸ್ವಾಮಿ ಅವರಿಗೆ ಏನಾಗುತ್ತಿತ್ತು. ಇದು ಅನ್ಯಾಯ ಸರ್. ಮೈಸೂರಿಗೆ ಮಾತ್ರ ನೀಡಿ, ಚಿಕ್ಕಬಳ್ಳಾಪುರಕ್ಕೆ ನೀಡುತ್ತಿಲ್ಲ. ಇದರಿಂದ ಮನೆಯಲ್ಲಿ ರೇಷ್ಮೆ ಸೀರೆಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ನನ್ನ ಹೆಂಡತಿ ನನಗೆ ಬೈತಾಳೆ” – ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಪಬ್ಲಿಕ್ ಟಿವಿ ಪ್ರತಿನಿಧಿಗೆ ಬಂದ ಕರೆಯ ಸಂಭಾಷಣೆ.

ಗೌರಿ ಹಬ್ಬದ ಅಂಗವಾಗಿ ರಾಜ್ಯ ಸರ್ಕಾರ ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಕೆಎಸ್‍ಐಸಿ) ಮಹಿಳೆಯರಿಗೆ ಕಡಿಮೆ ರೇಷ್ಮೆ ಸೀರೆ ನೀಡುವ ಆಫರ್ ಪ್ರಕಟಿಸಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಸೀರೆ ನೀಡದ್ದಕ್ಕೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳ ಬಹುತೇಕ ಮಹಿಳೆಯರು ಬೆಲೆಬಾಳುವ ಸೀರೆಯನ್ನು ಕಡಿಮೆ ಬೆಲೆಗೆ ಲಕ್ಕಿ ಕೂಪನ್ ಮೂಲಕ ಪಡೆಯುತ್ತಿರುವುದು ಬಯಲು ಸೀಮೆ ಜಿಲ್ಲೆಯ ಮಹಿಳೆಯರಿಗೆ ಸಹಿಸಲಾಗುತ್ತಿಲ್ಲ.

ಏನಿದು ಆಫರ್?
ಗೌರಿ ಹಬ್ಬದ ಅಂಗವಾಗಿ ರಾಜ್ಯ ಸರ್ಕಾರ ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಕೆಎಸ್‍ಐಸಿ) ವತಿಯಿಂದ ರಾಜ್ಯಾದ್ಯಂತ 14 ಸಾವಿರ ರೂ. ಬೆಲೆ ಬಾಳುವ 5 ಸಾವಿರ ಮೈಸೂರು ಸಿಲ್ಕ್ ಸೀರೆಗಳನ್ನು 4,725 ರೂ.ಗಳ ಬಂಪರ್ ರಿಯಾಯಿತಿ ದರದಲ್ಲಿ ನೀಡಿದೆ. ಲಕ್ಕಿ ಡಿಪ್ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದೆ. ಸೀರೆ ಅಗತ್ಯವಿರುವವರಿಂದ ಆಧಾರ್ ಕಾರ್ಡ್ ಪಡೆದು ಅವರ ಹೆಸರಿನ ಚೀಟಿಗಳನ್ನು ಲಕ್ಕಿ ಡಿಪ್ ಮುಖಾಂತರ ಆಯ್ಕೆ ಮಾಡಿದೆ. ಅಂತೆಯೇ ರಾಜ್ಯದ ಐದು ಕೇಂದ್ರಗಳಲ್ಲಿ ಸೀರೆ ಕೊಳ್ಳುವ ಮಹಿಳೆಯರಿಂದ ಆಧಾರ್ ಪಡೆದು ನೋಂದಣಿ ಕಾರ್ಯ ಆರಂಭಿಸಿ, ಸೀರೆ ವಿತರಿಸಲಾಗಿದೆ. ಆದರೆ ಈ ಕೇಂದ್ರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಲ್ಲ.

ಇಲಾಖಾಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ 3,000, ಚನ್ನಪಟ್ಟಣದಲ್ಲಿ 1,000, ದಾವಣಗೆರೆಯಲ್ಲಿ 500, ಬೆಳಗಾವಿಯಲ್ಲಿ 500 ಸೀರೆಗಳು ಸೇರಿ ಒಟ್ಟು 5 ಸಾವಿರ ಸೀರೆಗಳನ್ನು 5,000 ಮಂದಿ ಮಹಿಳೆಯರಿಗೆ ವಿತರಿಸಿದೆ. ಸೀರೆ ನಿಗದಿತ ಮೊತ್ತ 14 ಸಾವಿರ ರೂ. ಇದ್ದು, ಸರ್ಕಾರ ಅದನ್ನು 4,725 ರೂ.ಗೆ ರಿಯಾಯಿತಿಯಲ್ಲಿ ವಿತರಿಸಿದೆ. ಈ ಸೌಲಭ್ಯ ಹಲವು ಜಿಲ್ಲೆಗಳಿಗೆ ಸಿಗದಿರುವುದು ಪತಿರಾಯರ ಕಣ್ಣೀರ ಕತೆಗೆ ಕಾರಣವಾಗಿದೆ ಎಂದರೇ ನೀವು ನಂಬಲೇ ಬೇಕು.

ಇನ್ನೂ 5 ಜಿಲ್ಲೆಗಳಲ್ಲ ಗೌರಿ ಹಬ್ಬದ ಕೊಡುಗೆಯಾಗಿ ಬೆಲೆ ಬಾಳುವ ಸೀರೆಯನ್ನು ಕಡಿಮೆ ಬೆಲೆಗೆ ಪಡೆದುಕೊಂಡಿರುವ ನಾರಿಮಣಿಯರ ಸುದ್ದಿ ಮೀಡಿಯಾಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾದ ಬಳಿಕ ಜಿಲ್ಲೆಯಲ್ಲಿನ ಮಹಿಳೆಯರ ಕಣ್ಣು ಕೆಂಪಾಗಿದೆ. ನನಗೆ 10 ಸಾವಿರದ ರೇಷ್ಮೆ ಸೀರೆಯೇ ಬೇಕು ಎಂದು ತಮ್ಮ ಗಂಡದಿರ ಜೀವ ಹಿಂಡುತ್ತಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರುವ ಪತಿರಾಯರು, ಸರ್ಕಾರ ಮೋಸ ಮಾಡುತ್ತಿದೆ. ನಮ್ಮನ್ನು ನಮ್ಮ ಹೆಂಡತಿ ಮೂಲಕ ಗೋಳು ಹೂಯ್ದುಕೊಳ್ಳುತ್ತಿದೆ. ಸರ್ಕಾರ ಸುಮ್ಮನಿರಬೇಕಿತ್ತು. ಎಲ್ಲ ಜಿಲ್ಲೆಗಳಲ್ಲಿಯೂ ಸೀರೆ ನೀಡಬೇಕಿತ್ತು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹಬ್ಬ-ಹರಿದಿನಗಳಲ್ಲಿ ಜೇಬು ಖಾಲಿ ಮಾಡಿಕೊಳ್ಳುತ್ತಿದ್ದ ಪುರುಷರು, ಇದೀಗ ತಮ್ಮ ಪತ್ನಿಯರಿಗೆ ಸೀರೆ ಕೊಡಿಸಲು ಸಾಲ ಮಾಡುವಂತಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *