ಮಗಳನ್ನು ಆಫೀಸರ್ ಮಾಡಲು ದರೋಡೆಗೆ ಇಳಿದ ತಂದೆ

-ದರೋಡೆಗೆ ಧಾರಾವಾಹಿಯೇ ಸ್ಫೂರ್ತಿಯಂತೆ!

ಪಾಟ್ನಾ: ತಂದೆಯೊಬ್ಬ ಮಗಳನ್ನು ಆಫೀಸರ್ ಮಾಡುವುದಕ್ಕಾಗಿ ದರೋಡೆ ಮಾಡಲು ಪ್ರಾರಂಭಿಸಿದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.

ರಾಮ್ ಕಿಶೋರ್ ಸಿಂಗ್ ಅಲಿಯಾಸ್ ಬಾಬಾ ಎಂಬತಾನೇ ದರೋಡೆಗೆ ಇಳಿದ ತಂದೆ. ಶನಿವಾರ ಪೊಲೀಸರು ಬಂಧಿಸಿದ್ದ ನಾಲ್ವರು ದರೋಡೆಕೋರರಲ್ಲಿ ಈತನು ಒಬ್ಬನಾಗಿದ್ದು, ಆರೋಪಿಗಳೆಲ್ಲಾ ಪಾಟ್ನಾದ ನಿವಾಸಿಗಳಾಗಿದ್ದಾರೆ. ಕಿಶೋರ್ ಆರು ತಿಂಗಳ ಹಿಂದೆ ಈ ಗ್ಯಾಂಗ್ ಅನ್ನು ಸೇರಿದ್ದೇನೆಂದು ಪೊಲೀಸರಿಗೆ ತಿಳಿಸಿದ್ದಾನೆ. ನನ್ನ 12 ವರ್ಷದ ಮಗಳ ಶಾಲಾ ಶುಲ್ಕ ಹಾಗೂ ಟ್ಯೂಷನ್ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಳ್ಳತನ ಮಾಡಲು ಶುರುಮಾಡಿದೆ ಎಂದು ಹೇಳಿದ್ದಾನೆ.

ಕಿಶೋರ್ ಸಿಂಗ್ ಮೂಲತಃ ಪಾಟ್ನಾದ ದೇವಿ ಕಾಲೋನಿ ನಿವಾಸಿಯಾಗಿದ್ದು, ಮಗಳನ್ನು ಆಫೀಸರ್ ಮಾಡುವುದಕ್ಕೆ ದೂರದರ್ಶನದಲ್ಲಿ ಬರುವ ‘ಅಫ್ಸಾರ್ ಬಿಟಿಯಾ’ ಧಾರಾವಾಹಿ ನನ್ನ ಸ್ಫೂರ್ತಿ ಎಂಬುದು ತನಿಖೆಯ ವೇಳೆ ತಿಳಿದಿದೆ. ಕಿಶೋರ್ ಈ ಹಿಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, 6,000 ರೂ. ವೇತನ ಬರುತ್ತಿತ್ತು. ಆ ಕೆಲಸವನ್ನು ಬಿಟ್ಟು ಗ್ಯಾಂಗ್ ಸೇರಿದ್ದಾನೆ. ಮಗಳು ವೈಶಾಲಿ ಜಿಲ್ಲೆಯಿಂದ 15 ಕಿ.ಮೀ ದೂರವಿರುವ ಪ್ರಾಥಮಿಕ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದಾಳೆ.

ನಾನು ನನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಈ ಕೆಲಸವನ್ನು ಮಾಡಿದೆ. ನನನ್ನು ಕ್ಷಮಿಸಿ ನಾನು ಅಪರಾಧ ಮಾಡಿದ್ದೇನೆ ಎಂದು ಕ್ಷಮೆ ಕೇಳಿದ್ದಾನೆ ಎಂದು ವೈಶಾಲಿಯ ಪೊಲೀಸ್ ಅಧಿಕಾರಿ ಎಂ.ಎಸ್ ಧಿಲ್ಲನ್ ಸಿಂಗ್ ಹೇಳಿದರು.

ಬಿಹಾರದ ಇತರ ಜಿಲ್ಲೆಗಳಲ್ಲಿ ದರೋಡೆಕೋರರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಪೊಲೀಸ್ ಕಾರ್ಯಾಚರಣೆ ಮಾಡುವಾಗ ರಾಜ್ ಕಿಶೋರ್ ಸಿಂಗ್, ಕೃಷ್ಣಕುಮಾರ್, ಮುನ್ನಾ ಯಾದವ್ ಮತ್ತು ರೋಶನ್ ಕುಮಾರ್ ಎಂಬವರನ್ನು ಶನಿವಾರ ಬಂಧಿಸಲಾಗಿತ್ತು.

ಬಂಧಿಸಲಾಗಿದ್ದ ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ ಆಭರಣಗಳು, ಇಬ್ಬರ ಬಳಿ ಬಂದೂಕುಗಳು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 10 ಲಕ್ಷ ರೂ. ನಗದು ಬಹುಮಾನ ಮತ್ತು ಯುಎಸ್ ಡಾಲರ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಪೊಲೀಸರು ವಿದೇಶಿ ಕರೆನ್ಸಿಗಳ ಮೌಲ್ಯವನ್ನು ಬಹಿರಂಗಪಡಿಸಿಲ್ಲ. ಅಷ್ಟೇ ಅಲ್ಲದೇ ಕದ್ದ ಹಣದಿಂದ ಬಂಧಿತ ಆರೋಪಿಗಳು ಆಸ್ತಿಗಳನ್ನು ಖರೀದಿಸಿದ್ದಾರೆ. ಕೃಷ್ಣ ಯಾದವ್ ಇತ್ತೀಚೆಗೆ ದಾನಾಪುರದಲ್ಲಿ 15 ಲಕ್ಷ ರೂ. ಮೌಲ್ಯದ ಭೂಮಿಯನ್ನು ಖರೀದಿಸಿದ್ದು, ರೌಶನ್ ಕುಮಾರ್ ಎಂಬವನು ಸ್ಯಾಮಾಪಚ್ಚಕ್ ನಲ್ಲಿ ಅದೇ ಬೆಲೆಯಲ್ಲಿ ಖರೀದಿಸಿದ್ದಾನೆ. ಇದೀಗ ಆಸ್ತಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *