ಸೋದರಿಯನ್ನು ಪ್ರೀತಿಸ್ತಿದ್ದಾನೆಂದು ಹೊಡೆದು ಕೊಂದೇ ಬಿಟ್ಟ!

ಥಾಣೆ: ತನ್ನ ಸಹೋದರಿಯನ್ನು ಪ್ರೀತಿಸುತ್ತಿದ್ದಾನೆಂದು ವ್ಯಕ್ತಿಯೊಬ್ಬ 23 ವರ್ಷದ ಆಟೋ ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ರಾಹುಲ್ ನಾಮ್ಡಿಯೋ ಎಂದು ಗುರುತಿಸಲಾಗಿದ್ದು ಆರೋಪಿಯ ಬಂಧನದ ಬಳಿಕ ತನಿಖೆ ಮುಂದುವರಿದಿದೆ.

ಆರೋಪಿಯು ಕಳೆದ ಭಾನುವಾರ ನಗರದ ದೇವಸ್ಥಾನವೊಂದರ ಹತ್ತಿರ ವ್ಯಕ್ತಿಯೊಬ್ಬ ಗಾಯಗೊಂಡು ಬಿದ್ದಿರುವುದಾಗಿ ಅಂಬೆರ್ ನಾಥ್ ನಲ್ಲಿರುವ ಶಿವಾಜಿನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ಗಾಯಾಳು ವ್ಯಕ್ತಿ ಮೃತಪಟ್ಟಿದ್ದನು. ಹೀಗಾಗಿ ಆಕಸ್ಮಿಕ ಸಾವು ಅಂತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಲ್ಲಿಂದ ತೆರಳಿದ್ದರು. ಆ ಬಳಿಕ ಪೊಲೀಸರಿಗೆ ಪ್ರಕರಣ ಕುರಿತು ಶಂಕೆ ವ್ಯಕ್ತವಾಗಿದ್ದು, ವ್ಯಕ್ತಿಯ ಸಾವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ರು. ಈ ವೇಳೆ ನಾಮ್ಡಿಯೋಗೆ ಮೃತಪಟ್ಟ ವ್ಯಕ್ತಿಯ ಪರಿಚಯವಿರೋದಾಗಿ ಬೆಳಕಿಗೆ ಬಂದಿದೆ ಅಂತ ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು 25 ವರ್ಷದ ಬಬ್ಬು ಬಾಗ್ಡಿ ಎಂದು ಗುರುತಿಸಲಾಗಿದ್ದು, ಈತ ನಾಮ್ಡಿಯೋನ 21 ವರ್ಷದ ಸಹೋದರಿ ಜೊತೆ ಸಂಬಂಧ ಹೊಂದಿದ್ದನು. ಇವರಿಬ್ಬರ ಸಂಬಂಧಕ್ಕೆ ನಾಮ್ಡಿಯೋ ವಿರೋಧ ವ್ಯಕ್ತಪಡಿಸಿದ್ದನು. ಆದ್ರೂ ಬಬ್ಬು, ನಾಮ್ಡಿಯೋ ಸಹೋದರಿಯನ್ನು ಪ್ರೀತಿಸುತ್ತಿದ್ದನು. ಈ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಅಂತ ಅವರು ವಿವರಿಸಿದ್ದಾರೆ.

ಒಟ್ಟಾರೆ ಘಟನೆಗೆ ಸಂಬಂಧಿಸಿದಂತೆ ನಾಮ್ಡಿಯೋ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತಾನೇ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಬ್ಬುವನ್ನು ಪ್ರತ್ಯೇಕ ಸ್ಥಳವೊಂದಕ್ಕೆ ಕರೆದು ಆತನನ್ನು ಹೊಡೆದು ಕೊಲೆ ಮಾಡಿ ಬಳಿಕ ಗಾಯಗೊಂಡು ರಕ್ತದ ಮಡುವಿನಲ್ಲಿ ವ್ಯಕ್ತಿಯೊಬ್ಬ ಬಿದ್ದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಅಂತ ನಾಮ್ಡಿಯೋ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ನಂತರ ಆರೋಪಿಯನ್ನು ಪೊಲೀಸರು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ), 201(ಪುರಾವೆಗಳ ನಿರ್ಮೂಲನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ವಕ್ತಾರ ಸುಖಾದ ನರ್ಕಾರ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *