ಶಿವಮೊಗ್ಗ: ವಿಚ್ಛೇದನಕ್ಕೆ ಅರ್ಜಿ ಹಾಕಿರುವ ವ್ಯಕ್ತಿಯೊಬ್ಬನಿಗೆ ಪತ್ನಿ ಮತ್ತು ಪೊಲೀಸರು ಸೇರಿ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಿವಾನಂದ ಹನಿಟ್ರ್ಯಾಪ್ ಗೆ ಬಲಿಯಾಗುವುದನ್ನು ತಪ್ಪಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಶಿವಾನಂದ 2014ರಲ್ಲಿ ಪ್ರಿಯಾಂಕ ಜೊತೆ ಮದುವೆ ಆಗಿದ್ದರು. ಸಂಸಾರದಲ್ಲಿ ಸರಿ ಬರದ ಕಾರಣ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು, ಶಿವಮೊಗ್ಗ ನ್ಯಾಯಾಲಯದಲ್ಲಿ ಈ ಪ್ರಕರಣ ನಡೆಯುತ್ತಿದೆ.
ಈ ನಡುವೆ ಅಪರಿಚಿತ ನಂಬರ್ ನಿಂದ ಯುವತಿಯೊಬ್ಬಳು ಪದೇ ಪದೇ ಮೆಸೇಜ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದಾಳೆ. ಅಷ್ಟೇ ಅಲ್ಲದೇ ಯಾರೂ ಇಲ್ಲದ ಜಾಗಕ್ಕೆ ಬರಲು ಒತ್ತಾಯಿಸುತ್ತಿದ್ದಾಳೆ. ನನ್ನನ್ನು ಕೊಲೆ ಮಾಡಲು ಅಥವಾ ವ್ಯಭಿಚಾರ ಪ್ರಕರಣದಲ್ಲಿ ಸಿಲುಕಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಶಿವಾನಂದ ತುಂಗಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ. ಅವರೂ ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯನ್ನೂ ಕೂಡ ಅವರು ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಪೊಲೀಸ್ ಅಧಿಕಾರಿಗಳಾದ ಗಂಗಾಧರಪ್ಪ ಹಾಗೂ ಗ್ರಾಮಾಂತರ ಎಎಸ್ಐ ರಾಜಪ್ಪ ಇವರ ವಿರುದ್ಧ ಶಿವಾನಂದ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಕೇಸ್ ದಾಖಲಿಸಿದ್ದರು. ಇದರಿಂದ ದ್ವೇಷ ಸಾಧಿಸುತ್ತಾ ಈ ರೀತಿ ಮಾಡುತ್ತಿದ್ದಾರೆ ಎಂದು ಶಿವಾನಂದ ದೂರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply