ಕನ್ನಡ ಸಂಘಟನೆಗಳಿಗೆ ಹಣ ಬಿಡುಗಡೆ – ಸಿದ್ದರಾಮಯ್ಯ, ಉಮಾಶ್ರೀ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಅಧಿಕಾರ ದುರುಪಯೋಗ ಆರೋಪದಡಿಯಲ್ಲಿ ಎಸಿಬಿಗೆ ದೂರು ಸಲ್ಲಿಕೆಯಾಗಿದೆ.

ಸಿದ್ದರಾಮಯ್ಯ ಮತ್ತು ಉಮಾಶ್ರೀ ಯಾವುದೇ ದಾಖಲೆಗಳನ್ನ ಪಡೆಯದೇ ಎರಡು ಕನ್ನಡ ಸಂಘಟನೆಗಳಿಗೆ ಹಣ ಬಿಡುಗಡೆಗೆ ಶಿಫಾರಸ್ಸು ಮಾಡಿದ್ದನ್ನು ಖಂಡಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಆರೋಪಿಸಿ ಇವರ ವಿರುದ್ಧ ಎಸಿಬಿಗೆ ದೂರು ಸಲ್ಲಿಸಿದ್ದಾರೆ.

ನಾರಾಯಣ ಗೌಡ ನೇತೃತ್ವದ ಕರವೇ ವಿಶ್ವ ಕನ್ನಡ ಜಾಗೃತಿ ಸಮಾವೇಶಕ್ಕೆ ಹಾಗೂ ವಾಟಾಳ್ ನಾಗರಾಜ್ ಅವರ ಕರ್ನಾಟಕ ರಾಜೋತ್ಸವ ಸಮಿತಿಗೆ ಹಣ ನೀಡಿದ್ದಾರೆ. ವಿಶ್ವ ಜಾಗೃತಿ ಸಮಾವೇಶಕ್ಕೆ 2016-17ರಲ್ಲಿ 50 ಲಕ್ಷ ರೂ., 2017-18ರಲ್ಲಿ 50 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಸಮಿತಿಗೆ 2016-17 ರಲ್ಲಿ 50 ಲಕ್ಷ ರೂ. 2017-18 ರಲ್ಲಿ 60 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ನಾಗೇಶ್ ಆರೋಪ ಮಾಡಿದ್ದಾರೆ.

ಹಣ ಬಿಡುಗಡೆಗೆ ಮುನ್ನ ಹಾಗೂ ನಂತರ ಯಾವುದೇ ದಾಖಲೆ ಪಡೆಯಲಿಲ್ಲ. ಕೇವಲ ಸಿಎಂ ಶಿಫಾರಸ್ಸಿನ ಆಧಾರದ ಮೇಲೆ ಹಣ ಬಿಡುಗಡೆಯಾಗಿದೆ. ಕನ್ನಡಪರ ಹೋರಾಟ ಮಾಡುವ ಸಂಘಟನೆಗಳು ತುಂಬಾ ಇವೆ. ಅವುಗಳಿಗೂ ಹಣ ಬಿಡುಗಡೆ ಮಾಡಬೇಕು. ಆದರೆ ಈಗಾಗಲೇ ಬಿಡುಗಡೆ ಮಾಡಿರುವ ಹಣವು ದುರುಪಯೋಗವಾಗಿದ್ದು, ಅವರವರ ವೈಯಕ್ತಿಕ ವಿಚಾರಗಳಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂದು ನಾಗೇಶ್ ಆರೋಪಿಸಿದ್ದಾರೆ.

ಯಾವ ಉದ್ದೇಶಕ್ಕೆಂದು ಧನ ಸಹಾಯ ಪಡೆದಿದ್ದಾರೋ ಅದಕ್ಕೆ ಬಳಕೆ ಮಾಡಿರುವ ಬಗ್ಗೆ ಯಾವುದೇ ಸೂಕ್ತ ದಾಖಲೆಗಳನ್ನ ಒದಗಿಸಿಲ್ಲ. ಅಷ್ಟೇ ಅಲ್ಲದೇ ಅದಕ್ಕೆ ಸರಿಯಾದ ಲೆಕ್ಕವನ್ನು ಸಹ ಕೊಡಲಿಲ್ಲ. ಆದ್ದರಿಂದ ಈ ಬಗ್ಗೆ ಸರಿಯಾದ ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ನಾಗೇಶ್ ಅವರು ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *