ಟೈರ್ ಸಿಡಿದು ಸ್ಕಾರ್ಪಿಯೋ ಪಲ್ಟಿ – 3 ಸಾವು, 7 ಮಂದಿ ಸ್ಥಿತಿ ಗಂಭೀರ

ರಾಮನಗರ: ಸ್ಕಾರ್ಪಿಯೋ ಕಾರಿನ ಮುಂದಿನ ಟೈರ್ ಸಿಡಿದು ಪಲ್ಟಿ ಹೊಡೆದ ಪರಿಣಾಮ ಮೂವರು ಮೃತಪಟ್ಟರೆ, 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು-ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯ ತಿಗಳರ ಪಾಳ್ಯ ಸೇತುವೆ ಬಳಿ ನಡೆದಿದೆ.

ಬೆಂಗಳೂರು ಹೊಸಕೆರೆಹಳ್ಳಿ ಹಾಗೂ ತ್ಯಾಗರಾಜನಗರ ನಿವಾಸಿಗಳಾದ ರಕ್ಷನ್ (22), ಉಜ್ವಲ್ (22) ಹಾಗೂ ಹರೀಶ್ (22) ಮೃತ ದುರ್ದೈವಿಗಳು. ಇವರು ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ. ಇನ್ನು ಗಾಯಗೊಂಡ 7 ಮಂದಿಯನ್ನು ಕುಣಿಗಲ್ ಹಾಗೂ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ನಾಗಮಂಗಲದಲ್ಲಿ ರಮೇಶ್ ಸಂಬಂಧಿಕರೊಬ್ಬರ ಬೀಗರ ಊಟದ ಕಾರ್ಯಕ್ರಮವಿತ್ತು. ಹೀಗಾಗಿ ಇಂದು ಸ್ಕಾರ್ಪಿಯೋ ಕಾರಿನಲ್ಲಿ ಒಟ್ಟು 13 ಜನರು ಬೆಂಗಳೂರಿನಿಂದ ಚುಂಚನಗಿರಿ ಮಾರ್ಗವಾಗಿ ನಾಗಮಂಗಲಕ್ಕೆ ಹೊರಟಿದ್ದರು. ಈ ವೇಳೆ ತಿಗಳರ ಪಾಳ್ಯ ಸೇತುವೆ ಬಳಿ ಕಾರು ಬರುತ್ತಿದ್ದಂತೆ ಮುಂದಿನ ಟೈರ್ ಸಿಡಿದ ಪರಿಣಾಮ ಕಾರು ಪಲ್ಟಿ ಹೊಡೆದಿದೆ. ಅದರಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, 7 ಸ್ಥಿತಿ ಚಿಂತಾಜನಕವಾಗಿತ್ತು. ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಾಳಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಕಾರ್ಪಿಯೋ ಕಾರು ಸಂಪೂರ್ಣವಾಗಿ ಜಖಂಗೊಂಡು ರಸ್ತೆ ಬದಿಯಲ್ಲಿ ಬಿದ್ದಿದೆ. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *