ರೈತರು ತಮ್ಮ ಜಮೀನುಗಳಿಗೆ ತೆರಳಲು ಬೇಕು ದೋಣಿ ಸಹಾಯ- ಆಯ ತಪ್ಪಿದರೆ ಆಪಾಯ ಗ್ಯಾರಂಟಿ

ಬೆಳಗಾವಿ: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಮಾಡಲು ರೆಡಿಯಾಗಿದಾರೆ. ಆದರೆ ಈ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗಬೇಕೆಂದರೆ ದೋಣಿ ಸಹಾಯದಿಂದಲೇ ಹೋಗಬೇಕು. ಒಂದು ವೇಳೆ ಆಯ ತಪ್ಪಿದರೆ ಮಾತ್ರ ಆಪಾಯ ಗ್ಯಾರಂಟಿ.

ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಹುಣಶಿಕಟ್ಟಿ ಗ್ರಾಮದಲ್ಲಿ ಈ ದೃಶ್ಯ ಕಂಡುಬಂದಿದ್ದು, ಇಲ್ಲಿ ಉತ್ತಮ ಮಳೆಯಾದರೆ ರೈತರು ತಮ್ಮ ಜಮೀನುಗಳಿಗೆ ಹೋಗೋದು ಕಷ್ಟವಾಗುತ್ತದೆ. ಜಮೀನಿಗೆ ಹೋಗಲು ಜನರು ದೋಣಿಯಲ್ಲಿ ಪ್ರಯಾಣಿಸಬೇಕಾಗುತ್ತದೆ. ಅಲ್ಲದೇ ನದಿ ಆ ಕಡೆ ದಡ ಸೇರಲು ರೈತರು ತಮ್ಮ ಜಾನುವಾರುಗಳ ಜೊತೆಗೆ ನದಿಯಲ್ಲಿ ಈಜಬೇಕಾದ ಪರಿಸ್ಥಿತಿ ಬಂದಿದೆ.

ಈ ಗ್ರಾಮದ 1,500ಕ್ಕೂ ಹೆಚ್ಚು ಎಕರೆ ಜಮೀನು ಮಲಪ್ರಭೆ ನದಿ ಆಚೆ ಇದೆ. ರೈತರು ಏನಾದರೂ ಮಳೆ ಬಂದಿದೆ ಬಿತ್ತನೆ ಮಾಡಬೇಕೆಂದರೆ ನದಿ ದಾಟಲೇಬೇಕು. ಹೀಗಾಗಿ ರೈತರು ಜೀವ ಕೈಯಲ್ಲಿಟ್ಟುಕೊಂಡು ದೋಣಿ ಮೂಲಕ ಸಾಗುತ್ತಾರೆ. ಒಂದು ವೇಳೆ ಆಯ ತಪ್ಪಿದರೆ ಅಪಾಯ ಮಾತ್ರ ಕಟ್ಟಿಟ್ಟಬುತ್ತಿ. ಹೀಗಾಗಿ ತುಂಬಿ ಹರಿಯುತ್ತಿರುವ ಮಲಪ್ರಭೆಯಲ್ಲಿ ಜನ, ಜಾನುವಾರು ಈಜಿಕೊಂಡು ದಡ ಸೇರುವ ಸ್ಥಿತಿ ನಿರ್ಮಾಣವಾಗಿದೆ.

ಅನೇಕ ವರ್ಷಗಳಿಂದ ಹುಣಶಿಕಟ್ಟಿ ಗ್ರಾಮದ ಜನರು ತಮ್ಮ ಜಮೀನಿಗೆ ಹೋಗಲು ಪರದಾಡುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಒಂದು ಬೋಟ್ ವ್ಯವಸ್ಥೆ ಮಾಡಿ ಕೈತೊಳೆದುಕೊಂಡಿದೆ. ಈ ಬೋಟ್ ಬೆಳಗ್ಗೆ 9 ರಿಂದ 11, ಸಂಜೆ 3 ರಿಂದ 5ರ ವರೆಗೆ ಮಾತ್ರ ಕಾರ್ಯನಿರ್ವಹಿಸುತ್ತೆ. ಇನ್ನುಳಿದ ಸಂದರ್ಭದಲ್ಲಿ ರೈತರು ಜಮೀನಿಗೆ ಹೋಗಲು ನದಿಯಲ್ಲಿ ಈಜಿಕೊಂಡೆ ಹೋಗಬೇಕು. ನಮಗೊಂದು ಸೇತುವೆ ನಿರ್ಮಿಸಿದರೆ ಪುಣ್ಯ ಬರುತ್ತೆ ಎಂದು ಇಲ್ಲಿನ ಜನರು ಹೇಳುತ್ತಾರೆ.

ಒಟ್ಟಾರೆಯಾಗಿ ಹುಣಶಿಕಟ್ಟಿ ಗ್ರಾಮದ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಜಮೀನುಗಳಿಗೆ ತೆರಳುತ್ತಾರೆ. ರೈತರ ಈ ಸಮಸ್ಯೆಗೆ ಸರ್ಕಾರ ಸ್ಪಂದಿಸಿ ಶಾಶ್ವತ ಪರಿಹಾರ ಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *