ಐಸಿಯುನಲ್ಲಿ ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಇಲಿ ಕಚ್ಚಿದ ಗುರುತುಗಳು ಪತ್ತೆ!

ಭೋಪಾಲ್: ಮಧ್ಯಪ್ರದೇಶದ ದಾಮೋಹ್ ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ ಮೃತಪಟ್ಟಿದ್ದ 70 ವರ್ಷದ ವ್ಯಕ್ತಿಯ ದೇಹದಲ್ಲಿ ಇಲಿ ಕಚ್ಚಿದ ಗುರುತುಗಳು ಪತ್ತೆಯಾಗಿದೆ.

ಸೋಮವಾರ ರಾತ್ರಿ ಸುಖಾ ಸಪ್ತಾರ ಹಳ್ಳಿಯ ವಿರೇಂದ್ರ ಚಾದರ್ ಅವರ ತಂದೆ ಜಗದೀಶ್ ಚಾದರ್(70) ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಸೋಮವಾರ ಐಸಿಯುನಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದು, ಮೃತದೇಹವನ್ನು ಪಡೆದುಕೊಳ್ಳುವಾಗ ಇಲಿ ಕಚ್ಚಿದ ಗುರುತುಗಳು ಪತ್ತೆಯಾಗಿದೆ.

ಮಧ್ಯರಾತ್ರಿ 2 ಗಂಟೆಗೆ ತಂದೆ ಮೃತಪಟ್ಟಿದ್ದಾರೆ ಎಂದು ತಿಳಿಸಲಾಯಿತು. ಮೃತಪಟ್ಟ ದೇಹವನ್ನು ಪಡೆದುಕೊಳ್ಳುವಾಗ ದೇಹದ ಎಡಗಣ್ಣಿನ ಬಳಿ ಕೆಲವು ಗಂಭೀರ ಗುರುತುಗಳಾಗಿದ್ದವು ಮತ್ತು ಆ ಗಾಯಗಳಿಗೆ ಮುಲಾಮು ಹಾಕಲಾಗಿತ್ತು. ಅದನ್ನು ಕಂಡು ಏನಿದು ಎಂದು ಪ್ರಶ್ನಿಸಿದ್ದಾಗ ಸಿಬ್ಬಂದಿ ಇಲಿ ಕಚ್ಚಿದೆ ಎಂದು ಹೇಳಿದ್ದಾರೆ ಎಂಬುದಾಗಿ ವೀರೇಂದ್ರ ಚಾದರ್ ತಿಳಿಸಿದ್ದಾರೆ.

ಸಿವಿಲ್ ಸರ್ಜನ್ ಡಾ. ಮಮ್ತಾ ಟಿಮೊರಿರವರು ಈ ಘಟನೆ ನನಗೆ ಬುಧವಾರ ಬೆಳಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಯಾರೊಬ್ಬ ಸಿಬ್ಬಂದಿಯೂ ನನ್ನ ಗಮನಕ್ಕೆ ತಂದಿಲ್ಲ. ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದು ತನಿಖೆಗೆ ಆದೇಶಿಸಿದ್ದೇನೆ. ಇಲಿಗಳನ್ನು ನಿಯಂತ್ರಿಸಲು ಈಗಾಗಲೇ ಇಂದೋರ್ ಮೂಲದ ಕ್ರೀಮಿನಾಶಕ ಕಂಪೆನಿಯನ್ನು ಸಂಪರ್ಕಿಸಿದ್ದೇನೆ ಎಂದು ತಿಳಿಸಿದರು.

ಮಾನವ ಹಕ್ಕು ಕಾರ್ಯಕರ್ತ ಮನೋಜ್ ದಿವಾರಿಯಾ ಪ್ರತಿಕ್ರಿಯಿಸಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಈ ರೀತಿಯ ಘಟನೆ ಇದೇ ಮೊದಲ ಬಾರಿ ಅಲ್ಲ ಈ ಹಿಂದೆಯೂ ಸಂಭವಿಸಿತ್ತು. ಆದರೆ ಈ ಬಗ್ಗೆ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಐಸಿಯು ನಲ್ಲಿ ಇಲಿಗಳು ಕಂಡುಬಂದಿರುವುದು ಗಂಭೀರವಾದ ವಿಷಯವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ವಿಚಾರಣೆ ಮಾಡಲು ಆದೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *