ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಗಾಯಗೊಂಡ ಚಾಲಕನನ್ನು ಉಪಚರಿಸದೇ ಎಣ್ಣೆ ಕದಿಯುತ್ತಿದ್ದ ಜನ

ದಾವಣಗೆರೆ: ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಅಡುಗೆ ಎಣ್ಣೆಯ ಟ್ಯಾಂಕರ್ ವೊಂದು ಪಲ್ಟಿಯಾಗಿದ್ದು, ಈ ವೇಳೆ ಟ್ಯಾಂಕರ್ ನಲ್ಲಿದ್ದ ಎಣ್ಣೆ ತೆಗೆದುಕೊಳ್ಳಲು ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.

ಇಂದು ಬೆಳಗಿನ ಜಾವ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಡುಗೆ ಎಣ್ಣೆಯ ಟ್ಯಾಂಕರ್ ಉರುಳಿ ಬಿದ್ದಿದೆ. ಅಡುಗೆ ಎಣ್ಣೆ ಟ್ಯಾಂಕರ್ ಉರುಳಿಬಿದ್ದ ಸುದ್ದಿ ತಿಳಿದ ಜನರು ಟ್ಯಾಂಕರ್ ನ ಚಾಲಕ, ಕ್ಲೀನರ್ ಗೆ ಏನಾಗಿದೆ ಅಂತ ನೋಡದೇ, ಎಣ್ಣೆ ಕೊಂಡೊಯ್ಯಲು ಮುಗಿಬಿದ್ದಿದ್ದಾರೆ. ಜನರು ಆಟೋ, ಬೈಕ್ ಗಳಲ್ಲಿ ಬಂದು ಬಿಂದಿಗೆ, ಬಕೆಟ್, ದೊಡ್ಡ ದೊಡ್ಡ ಕ್ಯಾನ್ ಗಳಲ್ಲಿ ಎಣ್ಣೆ ತುಂಬಿಸಿಕೊಂಡು ಹೋಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ ಪೊಲೀಸರು, ಎಣ್ಣೆ ಕೊಂಡೊಯ್ಯಲು ಮುಗಿಬಿದ್ದಿದ್ದ ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಯೋಗವನ್ನೇ ಮಾಡಿದ್ದಾರೆ. ಪೊಲೀಸರು ಲಾಠಿ ಬೀಸುತ್ತಿದ್ದಂತೆ ನೆರೆದಿದ್ದ ಜನರು ಸ್ಥಳದಿಂದ ಪರಾರಿಯಾಗಿದ್ದಾರೆ. ಕೇವಲ ಅರ್ಧ ಗಂಟೆಯೊಳಗೆ ಟ್ಯಾಂಕರ್ ನಲ್ಲಿದ್ದ ಎಣ್ಣೆಯನ್ನು ಜನ ಖಾಲಿಮಾಡಿದ್ದರು.

ಅಪಘಾತದಿಂದಾಗಿ ಪೆಟ್ಟಾದ ಚಾಲಕ ಹಾಗೂ ಕ್ಲೀನರ್ ನನ್ನು ನೋಡದೇ ಜನ, ಟ್ಯಾಂಕರ್ ನಲ್ಲಿದ್ದ ಎಣ್ಣೆ ಕದಿಯಲು ಕಿತ್ತಾಟ ನಡೆಸಿದ್ದಾರೆ. ಘಟನೆ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *