ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರೈತನಿಗೆ ಕೈಗೆ ಸೇರಿತು ಬ್ಯಾಂಕ್ ಖಾತೆಯ ಹಣ

ಕೊಪ್ಪಳ: ಬ್ಯಾಂಕಿನಲ್ಲಿ ಜಮೆಯಾಗಿದ್ದ ಹಣ ನೀಡದೇ, ರೈತರೊಬ್ಬರನ್ನು ಸತಾಯಿಸುತ್ತಿದ್ದ ವರದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ರೈತರ ಹಣವನ್ನು ಮರಳಿಸಿದ್ದಾರೆ.

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ರೈತ ನಿಂಗಪ್ಪ ಪೂಜಾರ್ ಅವರು ಕೆನರಾ ಬ್ಯಾಂಕಿನಲ್ಲಿ ಕೃಷಿ ಸಾಲ ಪಡೆದಿದ್ದರು. ಈಗ ಅದರ ಮೊತ್ತ ಸುಮಾರು 1.80 ಲಕ್ಷ ರೂ. ಆಗಿದ್ದು, ನಿಂಗಪ್ಪ ಮರು ಪಾವತಿ ಮಾಡಿರಲಿಲ್ಲ. ಸಕ್ಕರೆ ಕಾರ್ಖಾನೆಯೊಂದು ರಸಗೊಬ್ಬರ ಖರೀದಿಗೆ ಅಂತಾ ನಿಂಗಪ್ಪ ಅವರ ಖಾತೆಗೆ 24 ಸಾವಿರ ರೂ. ಹಣವನ್ನು ಜಮೆ ಮಾಡಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ, ಬಜೆಟ್‍ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿರುವ ಸಾಲಮನ್ನಾ ಅಧಿಕೃತವಲ್ಲ ಎಂದು ನಿಂಗಪ್ಪ ಅವರ ಖಾತೆಗೆ ಜಮೆಯಾಗಿದ್ದ ಹಣವನ್ನು ಸಾಲ ಮರು ಪಾವತಿಗೆ ಸೇರಿಸಿಕೊಂಡಿದ್ದಾಗಿ ಹೇಳಿ ಸತಾಯಿಸುತ್ತಿದ್ದಾರೆ.

ನಿಂಗಪ್ಪ ಅವರು ನ್ಯಾಯ ಕೊಡಿಸುವಂತೆ ಪಬ್ಲಿಕ್ ಟಿವಿಗೆ ಮನವಿ ಮಾಡಿಕೊಂಡಿದ್ದರು. ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ಜೆಡಿಎಸ್ ನಾಯಕರು ಬ್ಯಾಂಕಿಗೆ ಬಂದು, ಸಿಬ್ಬಂದಿ ಹಾಗೂ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡರು. ಬಳಿಕ ರೈತ ನಿಂಗಪ್ಪ ಅವರಿಗೆ ಹಣವನ್ನು ಮರಳಿಸಿದ್ದಾರೆ.

ನಾನು ಕೇಳಿದಾಗ ನಿನಗೆ ಸಾಲ ಇದೆ ಅಂತಾ ಹಣ ನೀಡಲು ನಿರಾಕರಿಸಿದ್ದರು. ಸದ್ಯ ಬ್ಯಾಂಕ್ ಹಣ ಮಾರುಪಾತಿ ಮಾಡಿದ್ದರಿಂದ ಕೃಷಿ ಚಟುವಟಿಕೆ ಹಾಗೂ ಗೊಬ್ಬರ ಖರೀದಿಗೆ ಸಹಾಯವಾಗಿದೆ. ನನ್ನ ಸಮಸ್ಯೆಗೆ ಸ್ಪಂದಿಸಿದ ಜೆಡಿಎಸ್ ಮುಖಂಡರಿಗೆ ಹಾಗೂ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ನಿಂಗಪ್ಪ ಹೇಳಿದರು.

Comments

Leave a Reply

Your email address will not be published. Required fields are marked *