ಕ್ಷಮಿಸಿ, ನಾ ವಿಷ ಕುಡಿದಿದ್ದೀನಿ ಎಂದು ತವರು ಮನೆಗೆ ಫೋನ್ ಮಾಡಿ ನವವಿವಾಹಿತೆ ಆತ್ಮಹತ್ಯೆ!

ಶಿವಮೊಗ್ಗ: ಕ್ಷಮಿಸಿ, ನಾ ವಿಷ ಕುಡಿದಿದ್ದೀನಿ ಎಂದು ತವರು ಮನೆಗೆ ಫೋನ್ ಮಾಡಿ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಶಿವಮೊಗ್ಗ ತಾಲೂಕು ಶೆಟ್ಟಿಕೆರೆಯ ಜ್ಯೋತಿ(22) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಮದುವೆಯಾಗಿ ನಾಲ್ಕು ತಿಂಗಳಲ್ಲಿ ವರದಕ್ಷಿಣೆ ಕಿರುಕುಳ ತಾಳಲಾಗದೇ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ವಿಷ ಸೇವಿಸಿದ ಬಳಿಕ ತನ್ನ ತವರು ಮನೆಗೆ ಫೋನ್ ಮಾಡಿದ್ದ ಜ್ಯೋತಿ, ಗಂಡನ ಮನೆಯಲ್ಲಿ ಕಿರುಕುಳ ತಡೆಯಲಾಗುತ್ತಿಲ್ಲ. ವಿಷ ಕುಡಿದಿದ್ದೇನೆ ನನ್ನನ್ನು ಕ್ಷಮಿಸಿ ಎಂದು ಫೋನ್ ಮಾಡಿದ್ದಾಳೆ ಎಂದು ಸಹೋದರ ಸಂತೋಷ ತಿಳಿಸಿದ್ದಾರೆ.

ವಿಷ ಸೇವಿಸಿದ ತಕ್ಷಣ ಸಾಗರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿ ಆಗದೆ ಜ್ಯೋತಿ ಮೃತಪಟ್ಟಿದ್ದಾರೆ. ಸದ್ಯ ಈ ಬಗ್ಗೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಗರ ತಾಲೂಕಿನ ಜಂಬೂರುಮನೆಯ ಪುನೀತ್ ಕುಮಾರ್ ಜೊತೆ ನಾಲ್ಕು ತಿಂಗಳ ಹಿಂದೆ ಜ್ಯೋತಿ ಮದುವೆ ಆಗಿತ್ತು. ಮದುವೆ ಆದ ಕೆಲವೇ ದಿನಗಳಲ್ಲಿ ಗಂಡ ಪುನೀತ್ ಹಾಗೂ ಅತ್ತೆ ಲಲಿತಮ್ಮ ಕಿರುಕುಳ ನೀಡಲು ಆರಂಭಿಸಿದ್ದಾರೆ. ನೀನು ಚೆನ್ನಾಗಿಲ್ಲ, ಇನ್ನಷ್ಟು ವರದಕ್ಷಿಣೆ ಬೇಕು, ಟ್ರ್ಯಾಕ್ಟರ್ ಖರೀದಿಸಲು ಹಣ ಬೇಕು ಇತ್ಯಾದಿ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಜ್ಯೋತಿ ತವರಿಗೆ ಬಂದಿದ್ದಳು. ಆಗ ಆಕೆಗೆ ಹೊಂದಿಕೊಂಡು ಹೋಗುವಂತೆ ಬುದ್ದಿವಾದ ಹೇಳಿ ಮತ್ತೆ ಕಳುಹಿಸಿದ್ದೇವೆ. ಆದರೆ ಪತಿಯ ಮನೆಯಲ್ಲಿ ಮತ್ತೆ ಕಿರುಕುಳ ಹೆಚ್ಚಾದಾಗ ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜ್ಯೋತಿ ತಂದೆ ನಾರಾಯಣಪ್ಪ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *