– ಸಾವಿನ ನಂತರ ಹೊರಬಿತ್ತು ಪಂಚ ಪತ್ನಿಯರ ಕತೆ
ತುಮಕೂರು: ನಿವೃತ್ತ ಪಿಎಸ್ಐಯೋರ್ವ ನಿಗೂಢವಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಮದುವೆಯಾಗಿ ಪತ್ನಿಯರಿಗೆಲ್ಲಾ ವಂಚಿಸಿದ ಘಟನೆ ತುಮಕೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಸ್ವಾಂದೇನಹಳ್ಳಿ ನಿವಾಸಿ ದಿವಂಗತ ಪಿಎಸೈ ವಿಶ್ವನಾಥ್ ಬರೋಬ್ಬರಿ ಐದು ಮದುವೆಯಾಗಿದ್ದಾರಂತೆ. ಮೊದಲನೆಯವರು ಸರೋಜಮ್ಮ, ಎರಡನೆಯವರು ಶಾರದಾ ಹಾಗೂ ಮೂರನೆಯವರು ಕವನಾ(ಹೆಸರು ಬದಲಾಯಿಸಲಾಗಿದೆ). ಇನ್ನುಳಿದ ಇಬ್ಬರು ಪತ್ನಿಯರು ಈ ಜಂಟಾಟವೇ ಬೇಡ ಎಂದು ದೂರ ಉಳಿದಿದ್ದಾರೆ ಎಂದು ತಿಳಿದು ಬಂದಿದೆ.

ನಿವೃತ್ತ ಪಿಎಸ್ಐ ಸಾವನ್ನಪ್ಪಿದ್ದಾಗ ಆಸ್ತಿಗಾಗಿ ಪತ್ನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗಲೇ ಇವರಿಗೆ ಪಂಚ ಪತ್ನಿಯರು ಇರುವ ವಿಚಾರ ತಿಳಿದು ಬಂದಿದೆ. ವಿಶೇಷ ಅಂದರೆ 58ನೇ ವಯಸ್ಸಿನಲ್ಲೂ 22 ವರ್ಷದ ಯುವತಿ ಕವನಾ(ಹೆಸರು ಬದಲಾಯಿಸಲಾಗಿದೆ) ವಂಚಿಸಿದ್ದಾರಂತೆ. ಇದೇ ಜುಲೈ 18 ರಂದು ವಿಶ್ವನಾಥ್ ಸ್ವಾಂದೇನಹಳ್ಳಿಯ ತನ್ನ ಮನೆಯಲ್ಲಿ ಮೃತಪಟ್ಟಿದ್ದಾರೆ. ಈ ವೇಳೆ ಮೂರನೇ ಪತ್ನಿ ಕವನಾ ಮಾತ್ರ ಇದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮೊದಲ ಪತ್ನಿಯ ಮಕ್ಕಳು, ಎರಡನೇ ಪತ್ನಿ ಮತ್ತು ಮಕ್ಕಳು ಸ್ವಾಂದೇನಹಳ್ಳಿಗೆ ಧಾವಿಸಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಆಗಲೇ ವಿಶ್ವನಾಥ್ ಗೆ ಐದು ಮದುವೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಈಗ ಐವರಲ್ಲಿ ಮೂವರು ಪತ್ನಿಯರ ನಡುವೆ ಮಾತ್ರ ಆಸ್ತಿಗಾಗಿ ಗಲಾಟೆ ಜೋರಾಗಿದೆ. ಮೂವರು ಕೂಡಾ ಆಸ್ತಿಗಾಗಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹೋದಲೆಲ್ಲಾ ಠಾಣೆಗೊಂದರಂತೆ ಮದುವೆಯಾದ ವಿಶ್ವನಾಥ್, ಪತ್ನಿಯರನ್ನು ಸಂಕಷ್ಟದಲ್ಲಿ ಸಿಲುಕಿಸಿ ಇಹಲೋಕ ತ್ಯಜಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply