ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಲು ಪ್ರಯಾಣಿಕರೇ ಕಾರಣ – ರೈಲ್ವೇ ಅಧಿಕಾರಿಗಳಿಂದ ಸ್ಪಷ್ಟನೆ

ಬೆಂಗಳೂರು/ಹುಬ್ಬಳ್ಳಿ: ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಲು ಪ್ರಯಾಣಿಕರೇ ಕಾರಣ ಎಂದು ರೈಲ್ವೇ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ನೈಋತ್ಯ ರೈಲ್ವೇಯ ಡಿಜಿಎಂ ಇ. ವಿಜಯಾ ಅವರು, ತಾಂತ್ರಿಕ ಕಾರಣದಿಂದ ಸಮಸ್ಯೆ ಆಗಿದ್ದು ನಿಜ. ಆದರೆ ಮೇನ್ ಟ್ರ್ಯಾಕ್ ಸಮಸ್ಯೆ ಇದ್ದಿದ್ದರಿಂದ ಗೂಡ್ಸ್ ಮತ್ತು ರಾಣಿ ಚೆನ್ನಮ್ಮ ರೈಲು ಒಂದೇ ಹಳಿಯಲ್ಲಿ ಚಲಿಸುತ್ತಿದ್ದವು. ಗೂಡ್ಸ್ ರೈಲಿನ ಇಂಜಿನ್ ಕೈ ಕೊಟ್ಟಿತ್ತು. ಹೀಗಾಗಿ ಅದನ್ನ ಹಳಿಯಿಂದ ಸರಿಸಲು ರಾಣಿಚೆನ್ನಮ್ಮ ರೈಲಿನ ಇಂಜಿನ್ ಜೋಡಿಸಲಾಗಿತ್ತು. ರೈಲಿನ ಚಾಲನೆಯಲ್ಲಿ ಕೇವಲ ಒಂದು ಗಂಟೆ ಮಾತ್ರ ತಡವಾಗಿದೆ ಆದರೆ 8 ಗಂಟೆಯಲ್ಲ ಎಂದು ಹೇಳಿದ್ದಾರೆ.

ಗೂಡ್ಸ್ ರೈಲನ್ನು ಟ್ರ್ಯಾಕ್ ನಿಂದ ಬದಲಿಸಲು ಚೆನ್ನಮ್ಮ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಬಳಸಿ ಮಧ್ಯರಾತ್ರಿ 1 ಗಂಟೆಗೆ ಮತ್ತೆ ಚೆನ್ನಮ್ಮ ರೈಲಿಗೆ ಇಂಜಿನ್ ಜೋಡಿಸಲಾಗಿತ್ತು. ಒಂದು ಗಂಟೆ ತಡವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು, ಪರೀಕ್ಷಾರ್ಥಿಗಳು ರೊಚ್ಚಿಗೆದ್ದಿದ್ದರು. ರೈಲನ್ನು ನಿಲ್ದಾಣದಿಂದ ಬಿಡದೇ ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಅವರನ್ನು ನಿಯಂತ್ರಿಸಿ ರೈಲು ಸಾಗಿದರೂ ಪದೇ ಪದೇ ಅಲಾರಾಮ್ ಚೈನ್ ಎಳೆದಿದ್ದಾರೆ. ನಾವು ಅವರನ್ನು ಸಂತೈಸುವ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೇ ರೈಲಿಗೆ ಕಲ್ಲು ಹೊಡೆದಿದ್ದಾರೆ. ಎಷ್ಟೇ ತಡವಾಗಿದ್ದರೂ ನಮ್ಮ ಪ್ರಕಾರ ರೈಲು ಇಂದು ಬೆಳಗ್ಗೆ 7 ಗಂಟೆ ಹೊತ್ತಿಗೆ ಬೆಂಗಳೂರು ತಲುಪುತಿತ್ತು. ಪ್ರಯಾಣಿಕರು ಪ್ರತಿಭಟನೆ ಮಾಡಿದ್ದರಿಂದ ತಡವಾಗಿದೆಯೇ ಹೊರತು ನಮ್ಮಿಂದಲ್ಲ ಎಂದು ಸ್ಪಷ್ಟನೆ ನೀಡಿದರು.

ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲೇ ಸುಮಾರು 7 ಗಂಟೆಗಳ ಕಾಲ ನಿಂತ ಹಿನ್ನೆಲೆಯಲ್ಲಿ ಬೆಂಗಳೂರು ತೆರಳಬೇಕಿದ್ದ ಪರೀಕ್ಷಾರ್ಥಿಗಳು ಪರದಾಡಿದಾಡಿದ್ದರು. ಮುಖ್ಯವಾಗಿ ಬೆಳಗಾವಿ ಹಾಗೂ ಧಾರವಾಡ ಭಾಗದಿಂದ ಬೆಂಗಳೂರಿಗೆ ಡಿ.ಆರ್ ಪರೀಕ್ಷೆ ಬರೆಯಲು ಇದೇ ಟ್ರೈನ್ ನಲ್ಲಿ ಬರುತ್ತಿದ್ದ ಇದ್ದ ಸಾವಿರಾರೂ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಬೆಂಗಳೂರು ತಲುಪಲಾಗದೇ ಪರೀಕ್ಷೆಯಿಂದ ವಂಚಿತರಾಗಿದ್ದರು. ಶನಿವಾರ ಮಧ್ಯಾಹ್ನ ಕೊಲ್ಹಾಪುರ ಬಿಟ್ಟ ಈ ಟ್ರೈನ್ ಇಂದು ಬೆಳಗ್ಗೆ 6.45ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದ್ರೆ 7 ಗಂಟೆಗಳ ಕಾಲ ತಡವಾದ ಹಿನ್ನೆಲೆಯಲ್ಲಿ ಈ ಟ್ರೈನ್‍ಗಾಗಿ ಎಲ್ಲ ನಿಲ್ದಾಣಗಳಲ್ಲಿ ಕಾಯುತ್ತ ನಿಂತ ಪ್ರಯಾಣಿಕರು ರೋಸಿಹೋಗಿದ್ದರು.

ಈ ವಿಷಯದ ಕುರಿತು ಮಾಹಿತಿ ಪಡೆದ ಸಿಎಂ ಕುಮಾರಸ್ವಾಮಿ ಅವರು, ಡಿಎಆರ್ ಪರೀಕ್ಷೆಯಿಂದ ಕೆಲ ವಿದ್ಯಾರ್ಥಿಗಳ ವಂಚನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಿ ಬೆಂಗಳೂರು ತಲುಪಿದ ಕಾರಣ ಪರೀಕ್ಷೆ ಬರೆಯಲು ಆಗದವರಿಗೆ ಮರುಪರೀಕ್ಷೆಗೆ ಅನುವು ಮಾಡಿಕೊಡುತ್ತೇನೆ. ಹುಬ್ಬಳ್ಳಿ ಪರೀಕ್ಷಾ ಕೇಂದ್ರಕ್ಕೂ ಅವಕಾಶ ಮಾಡುತ್ತೇನೆ. ಮುಂದೆ ಈ ರೀತಿಯ ಘಟನೆಗಳಾಗದಂತೆ ನಿಗಾ ವಹಿಸಲು ರೈಲ್ವೇ ಸಚಿವರ ಜೊತೆಗೆ ನಾನು ಮಾತನಾಡುತ್ತೇನೆ ಎಂದು ತಿಳಿಸಿ ಟ್ವೀಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *