ದೂರು ನೀಡಿದ್ದಕ್ಕೆ ಯುವತಿಯರಿಬ್ಬರ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ

ಮಂಗಳೂರು: ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದೂರು ನೀಡಿದ್ರು ಎಂದು ಕಾಮುಕನೊರ್ವ ಯುವತಿಯರಿಬ್ಬರ ಅತ್ಯಾಚಾರ ಮಾಡಿ ಕೊಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯಲ್ಲಿ ನಡೆದಿದೆ. ಈ ಮೊದಲು ಸಹ ಆರೋಪಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದನು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಗಂಡಿಬಾಗಿಲು ನಿವಾಸಿ ಥಾಮಸ್ ವಿರುದ್ಧ ಕೆಲ ದಿನಗಳ ಹಿಂದೆ ಅಕ್ಕ-ತಂಗಿಯರಿಬ್ಬರು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಥಾಮಸ್ ಸೇಡು ತೀರಿಸಿಕೊಳ್ಳಲು ಯತ್ನಿಸಿದ್ದಾನೆ.

ಉಜಿರೆ ಪಟ್ಟಣದಿಂದ ಕೆಲಸ ಮುಗಿಸಿ ಯುವತಿಯರು ಮನೆ ಕಡೆಗೆ ಆಟೋ ಹತ್ತಿದ್ದಾರೆ. ಆರೋಪಿ ಥಾಮಸ್ ಪಿಕ್ ಅಪ್ ವಾಹನ ಮೂಲಕ ಯುವತಿಯರಿದ್ದ ಆಟೋ ವನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಆಟೋ ಗಂಡಿಬಾಗಿಲು ಬಳಿ ಬರುತ್ತಿದ್ದಂತೆಯೇ ಥಾಮಸ್ ಪಿಕ್ ಅಪ್ ವಾಹನವನ್ನು ಆಟೋಗೆ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಯುವತಿಯರಿಬ್ಬರೂ ಆಟೋದಿಂದ ಹೊರಗೆ ಬಿದ್ದಿದ್ದು, ಥಾಮಸ್ ಹುಡುಗಿಯರಿಗೆ ಮನಬಂದಂತೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಟೋ ಚಾಲಕ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆಯೇ ಥಾಮಸ್ ಪರಾರಿಯಾಗಿದ್ದಾನೆ.

ಸಂತ್ರಸ್ತ ಯುವತಿಯರಿಬ್ಬರು ಧರ್ಮಸ್ಥಳ ಠಾಣೆಯಲ್ಲಿ ಅತ್ಯಾಚಾರ ಯತ್ನ ಮತ್ತು ಕೊಲೆ ಯತ್ನ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಥಾಮಸ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆಟೋ ಚಾಲಕನಿಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಆಟೋ ಚಾಲಕನ ಬಳಿ ವಿಚಾರಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *