ಸಾಹಿತಿ ಎನಿಸಿಕೊಂಡಿರೋ ವಿದ್ಯಾರ್ಥಿಗೆ ಬೇಕಿದೆ ವಸತಿ-ಊಟದ ಸೌಲಭ್ಯ

ಬೀದರ್: ಓದಿನ ಮೇಲೆ ಶ್ರದ್ಧೆ-ಆಸಕ್ತಿ ಇದ್ರೆ ಬಡತನ ಅಡ್ಡಿಯಾಗಲಾರದು ಎಂಬುದಕ್ಕೆ ಈ ಕಥೆ ಸಾಕ್ಷಿ. ಬಡ ಪ್ರತಿಭಾವಂತ ರಾಜು ಎಂ ಪವಾರ್ ಬೀದರ್ ತಾಲೂಕಿನ ಚಿಲ್ಲರ್ಗಿ ಗ್ರಾಮದವರು. ತಂದೆ ಮಾರುತಿ ಪವಾರ್ ತಾಯಿ ರಂಗಾಬಾಯಿ. ಇವರಿಗೆ 4 ಮಕ್ಕಳು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂಬ ಪೋಷಕರ ಹಠದಿಂದ ಕಬ್ಬು ಕಟಾವು ಮಾಡುವ ಕೆಲಸಕ್ಕೆ ಹೋಗಿ ಬಂದ ಹಣದಿಂದ ಮಕ್ಕಳನ್ನ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ.

ಮಗ ರಾಜು ಎಂ ಪವಾರ್ ಓದುವ ಹಠಕ್ಕೆ ಬಿದ್ದು, ಸರ್ಕಾರಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ 566 ಅಂಕ ಶೇಕಡಾ 90.56% ಪಡೆದು ಶಾಲೆಗೆ ಹೆಸರು ತಂದಿದ್ದಾನೆ. 9ನೇ ತರಗತಿಯಲ್ಲಿ ಓದುತ್ತಿದ್ದಾಗ ಶಿಕ್ಷಕರ ಪ್ರೇರಣೆಯಿಂದಾಗಿ `ಅಂಕುರ್’ ಎಂಬ ಕವನ ಸಂಕಲನ ಬರೆದು ಪುಸ್ತಕ ರೂಪದಲ್ಲಿ ಹೊರ ತಂದು ಸಾಹಿತಿ ಎನ್ನಿಸಿಕೊಂಡಿದ್ದಾನೆ.

ಎಸ್‍ಎಸ್‍ಎಲ್‍ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ರಾಜು ಮುಂದೆ ಸೈನ್ಸ್ ಆಯ್ಕೆ ಮಾಡಿಕೊಳ್ಳುವ ಕನಸು ಕಂಡು ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣ ಇಲ್ಲದೇ ದಿಕ್ಕು ತೋಚದೆ ಕಂಗಲಾಗಿದ್ದ. ಆದ್ರೆ ಕ್ಯಾಮೆರಾನ್ ಇಂಡಿಪೆಂಡೆಂಟ್ ಪಿಯು ಕಾಲೇಜಿನವರು ಬಡ ವಿದ್ಯಾರ್ಥಿ ರಾಜುಗೆ ಉಚಿತ ಪುಸ್ತಕ ಮತ್ತು ಶಿಕ್ಷಣ ನೀಡುತ್ತಿದ್ದಾರೆ.

ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿರುವ ರಾಜು, ತನ್ನ ಮನೆಯಿಂದ 30 ಕೀ.ಮೀ ದೂರದಲ್ಲಿರುವ ಕಾಲೇಜಿಗೆ ಹೋಗಲು ಇರುವುದೊಂದೇ ಬಸ್. ಈ ಬಸ್ ಮೂಲಕ ಹೋಗಿ ಬರಬೇಕು. ಆದ್ರೆ ಕನ್ನಡ ಶಾಲೆಯಲ್ಲಿ ಓದಿರುವ ರಾಜು ಇಂಗ್ಲೀಷ್‍ನಲ್ಲಿ ಕಲಿತು ಓದಬೇಕಾಗಿದ್ದು, ಹೆಚ್ಚು ಸಮಯ ಓದಿಗೆ ಮೀಸಲಿಡಬೇಕಿದೆ. ಆದ್ರೆ ದೂರದ ಊರಿಗೆ ಶಿಕ್ಷಣಕ್ಕಾಗಿ ಹೋಗಿ ಬರಬೇಕಿರುವುದು ಈತನ ಕಲಿಕೆಗೆ ಅಡ್ಡಿಯಾಗಿದೆ.

ದಿನವೂ ಬೀದರ್ ಹೋಗಿ ಬರುವುದರಿಂದ ಕಲಿಕೆಗೆ ಕಷ್ಟವಾಗುತ್ತಿದೆ. ಆದ್ರೆ ಆದರೆ ಕಿತ್ತು ತಿನ್ನುವ ಬಡತನ ನಗರದಲ್ಲಿ ಉಳಿದುಕೊಳ್ಳಲು ಅಡ್ಡಿಯಾಗಿದೆ. ಯಾರಾದ್ರೂ ದಾನಿಗಳು ವಸತಿ-ಊಟದ ಸೌಲಭ್ಯ ಕಲ್ಪಿಸಿಕೊಡಿ. ಮುಂದೆ ಓದಿ ಸಾಧನೆ ಮಾಡಿ ಕುಟುಂಬಕ್ಕೆ ಹಾಗು ಸಮಾಜಕ್ಕೆ ಹೊರೆಯಾಗದಿರಲು ಸಹಾಯ ಮಾಡಿ ಎಂದು ವಿದ್ಯಾರ್ಥಿ ರಾಜು ಮತ್ತು ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

https://www.youtube.com/watch?v=zB5pJGVAswo

Comments

Leave a Reply

Your email address will not be published. Required fields are marked *