ಇಂದಿನಿಂದಲೇ ವಿಧಾನಸೌಧದೊಳಗೆ ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ

ಬೆಂಗಳೂರು: ವಿಧಾನಸೌಧಕ್ಕೆ ಖಾಸಗಿ ಮತ್ತು ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ವಿಧಾನಸೌಧದಲ್ಲಿ ಪೊಲೀಸರು ಇಂದಿನಿಂದಲೇ ಖಾಸಗಿ ವಾಹನಗಳ ಪ್ರವೇಶವನ್ನು ತಡೆಹಿಡಿದಿದ್ದು, ಪಾಸ್ ಇದ್ದ ಮಾಧ್ಯಮಗಳಿಗೂ ವಿಧಾನಸೌಧದ ಗೇಟ್ ವರೆಗೆ ಮಾತ್ರ ಪ್ರವೇಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೇ ಗೇಟ್ ಬಳಿ ಕಾರ್ ನಿಲ್ಲಿಸಿ, ವಿಧಾನಸೌಧದ ಒಳಗೆ ಮಾಧ್ಯಮಗಳು ಬರಬೇಕು ಎಂದು  ಪೊಲೀಸರು ತಿಳಿಸುತ್ತಿದ್ದಾರೆ.

ಖುದ್ದು ಡಿಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ವಿಧಾನಸೌಧಗಳಲ್ಲಿರುವ ಖಾಸಗಿ ವಾಹನಗಳನ್ನ ಖಾಲಿ ಮಾಡಿಸುತ್ತಿದ್ದಾರೆ. ಕೇವಲ ವಕೀಲರು ಹಾಗೂ ಸರ್ಕಾರಿ ವಾಹನಗಳಿಗೆ ಮಾತ್ರ ವಿಧಾನಸೌಧದ ಒಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಮೂಲಕ ಮಾಧ್ಯಮಗಳ ಮೇಲಿನ ನಿಯಂತ್ರಣದ ಮೊದಲ ಹೆಜ್ಜೆಯನ್ನು ಸಿಎಂ ಕುಮಾರಸ್ವಾಮಿ ಇಟ್ಟಿದ್ದಾರೆ.

ವಿಧಾನಸೌಧದ ಗೇಟ್‍ವರೆಗೆ ಮಾತ್ರ ಮಾಧ್ಯಮ ವಾಹನಗಳಿಗೆ ಅವಕಾಶ ನೀಡಿದ್ದು, ವರದಿಗಾರರು ಹಾಗೂ ಕ್ಯಾಮೆರಾಮನ್‍ಗಳು ಗೇಟ್ ಬಳಿ ತಮ್ಮ ವಾಹನ ನಿಲ್ಲಿಸಿ ವಿಧಾನಸೌಧದ ಒಳಗೆ ಪ್ರವೇಶ ಮಾಡಬಹುದಾಗಿದೆ. ಅಲ್ಲದೇ ಪಾಸ್ ಹೊಂದಿರುವ ಮಾಧ್ಯಮಗಳ ವಾಹನಗಳನ್ನು ಪಾರ್ಕಿಂಗ್ ವರೆಗೆ ಬಿಡಲು ಅವಕಾಶ ಕಲ್ಪಿಸಿದ್ದು, ವಾಹನಗಳನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಿ ವಿಧಾನಸೌಧಕ್ಕೆ ನಡೆದುಕೊಂಡು ಬರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಧ್ಯಮಗಳಿಗೆ ವಿಧಾನಸೌಧಕ್ಕೆ ನಿರ್ಬಂಧ ಹಾಕಿರುವ ವಿಚಾರವನ್ನು ಮಾಧ್ಯಮಗಳು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದಾಗ, ಅವರು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅಲ್ಲದೇ ಈ ಬಗ್ಗೆ ನನಗೆ ಗೊತ್ತಿಲ್ಲ, ನೋ ಕಾಮೆಂಟ್ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *