ಬೆಂಗ್ಳೂರು ಆಯ್ತು, ಈಗ ದೆಹಲಿಯಲ್ಲೂ ಶುರುವಾಗಿದೆ ಸಚಿವ ರೇವಣ್ಣ ಖದರ್!

ನವದೆಹಲಿ: ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರು ಸೂಪರ್ ಸಿಎಂ ಆಗಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಮತ್ತೆ ಹುಟ್ಟಿಕೊಂಡಿದೆ. ಮಂಗಳವಾರ ಸಿಎಂ ಕುಮಾರಸ್ವಾಮಿಯವರು ಕೇಂದ್ರ ಸಾರಿಗೆ ಸಚಿವ ಗಡ್ಕರಿ ಭೇಟಿ ವೇಳೆ ರೇವಣ್ಣ ಅವರು ನಡೆದುಕೊಂಡ ರೀತಿಯಿಂದಾಗಿ ಈ ಪ್ರಶ್ನೆ ಮತ್ತೆ ಎದ್ದಿದೆ.

ರಾಜ್ಯದ ವಿವಿಧ ಹೆದ್ದಾರಿ ಯೋಜನೆ ಸಂಬಂಧ ಕುಮಾರಸ್ವಾಮಿಯವರು ಗಡ್ಕರಿ ಜೊತೆ ಚರ್ಚಿಸಿದರು. ಈ ವೇಳೆ ಎಚ್‍ಡಿ ರೇವಣ್ಣ ಸಹ ಉಪಸ್ಥಿತರಿದ್ದರು.

ಮಾತುಕತೆಯ ವೇಳೆ ಎಚ್‍ಡಿ ರೇವಣ್ಣ ಅವರೇ ಗಡ್ಕರಿ ಜೊತೆ ಹೆಚ್ಚು ಮಾತನಾಡುತ್ತಿದ್ದರು. ಸಭೆಯಲ್ಲಿ ಕುಮಾರಸ್ವಾಮಿಗಿಂತಲೂ ರೇವಣ್ಣ ಅವರೇ ಜಾಸ್ತಿ ಮಾತನಾಡುತ್ತಿದ್ದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ:  ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

ರೇವಣ್ಣ ಅವರು ಕುಮಾರಸ್ವಾಮಿ ಜೊತೆ ಸಭೆಗಳಲ್ಲಿ ಭಾಗವಹಿಸುವುದು ಇದೇ ಮೊದಲಲ್ಲ. ಈ ಹಿಂದೆ ವಿಧಾನಸೌಧದಲ್ಲಿ ಹಾಸನ ವೈದ್ಯಕೀಯ ಕಾಲೇಜಿಗೆ ಸಂಬಂಧಪಟ್ಟ ಸಭೆ ನೆಪದಲ್ಲಿ ರೇವಣ್ಣ ಮೂರು ಸಭೆಗಳಲ್ಲಿ ಹಾಜರಿದ್ದರು. ಅಷ್ಟೇ ಅಲ್ಲದೇ ಹೆಚ್‍ಡಿಕೆ ಸುದ್ದಿಗೋಷ್ಠಿ ಕರೆದಾಗಲೂ ರೇವಣ್ಣ ಮಾತಾಡೋದಕ್ಕೆ ಶುರು ಮಾಡಿ ಸಿಎಂಗೆ ಮುಜುಗರ ತಂದಿಟ್ಟರು.

ಹಾಲಿನ ದರ ವಿಚಾರಕ್ಕೆ ಏನು ಮಾಹಿತಿ ಅದು ಅಂತಾ ಹೆಚ್‍ಡಿಕೆ ರೇವಣ್ಣ ಅವರನ್ನ ಪ್ರಶ್ನಿಸಿದರು. ಆಗ ಪ್ರೆಸ್‍ಮೀಟ್ ನಲ್ಲಿ ತಾವೇ ಮಾತಾಡಲು ರೇವಣ್ಣ ಶುರು ಮಾಡಿದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಹೆಚ್‍ಡಿಕೆ, ನೀನು ಒಂದು ಪ್ರೆಸ್‍ಮೀಟ್ ಕರೆದು ಎಲ್ಲ ಹೇಳಿಬಿಡು ಎಂದು ಹೇಳಿ ಸುಮ್ಮನಾಗಿಸಿದ್ದರು.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್‍ಡಿ ದೇವೇಗೌಡ ಮತ್ತು ರಾಹುಲ್ ಗಾಂಧಿ ಹೈಕಮಾಂಡ್ ಆಗಿರುವ ಜೊತೆಗೆ ಈಗ ರೇವಣ್ಣನವರ ವರ್ತನೆಯಿಂದ ಅವರು ಮೂರನೇ ಹೈಕಮಾಂಡ್ ಆಗಿದ್ದಾರಾ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.  ಇದನ್ನೂ ಓದಿ:ಸೂಪರ್ ಸಿಎಂನ ಸೂಪರ್ ಪವರ್: ಆಪ್ತರಿಗೆ ಎರಡೆರಡು ಜವಾಬ್ದಾರಿ ಹೊರಿಸಿದ ಎಚ್‍ಡಿ ರೇವಣ್ಣ!

 

Comments

Leave a Reply

Your email address will not be published. Required fields are marked *