ಬಾಗಲಕೋಟೆಯಲ್ಲಿ ನಟ ಸಾರ್ವಭೌಮನಿಗೆ ಎದುರಾಯ್ತು ವಿಘ್ನ!

ಬಾಗಲಕೋಟೆ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟ ಸಾರ್ವಭೌಮ ಸಿನಿಮಾ ಚಿತ್ರೀಕರಣಕ್ಕೆ ವಿಘ್ನ ಎದುರಾಗಿದ್ದು, ಚಿತ್ರತಂಡ ಅದನ್ನು ತಕ್ಷಣ ಪರಿಹಾರ ಮಾಡಿದೆ.

ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿತ್ತು. ದಕ್ಷಿಣ ಕಾಶಿ ಎಂದೇ ಖ್ಯಾತಿ ಹೊಂದಿರುವ ಮಹಾಕೂಟೇಶ್ವರ ಹೊಂಡದಲ್ಲಿ ನಟಸಾರ್ವಭೌಮ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿತ್ತು.

ಆದರೆ ಚಿತ್ರೀಕರಣಕ್ಕಾಗಿ ಐತಿಹಾಸಿಕ ಹೊಂಡದ ನೈಜತೆಯನ್ನ ಮರೆಮಾಚಿ ಹೊಂಡದಲ್ಲಿ ಸೆಟ್ ಹಾಕಲಾಗಿತ್ತು. ಶನಿವಾರ ರಾತ್ರಿ ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಕ್ಲೈಮಾಕ್ಸ್ ಚಿತ್ರೀಕರಣದಲ್ಲಿ ಭಾಗವಹಿಸುವವರಿದ್ದರು. ಆದರೆ ಹೊಂಡದಲ್ಲಿ ಡಿಗ್ಗಿಂಗ್ ಮಾಡಿ ಸೆಟ್ ಹಾಕಿರುವುದರಿಂದ ಹೊಂಡದ ಅಂತರ್ಜಲ ಕಡಿಮೆ ಆಗುತ್ತದೆ ಎಂದು ಸ್ಥಳೀಯರು ಆತಂಕದಿಂದ ಚಿತ್ರೀಕರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಚಿತ್ರೀಕರಣಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಚಿತ್ರತಂಡ ಅನುಮತಿ ಪತ್ರ ಹಾಜರುಪಡಿಸಿ ಚಿತ್ರೀಕರಣವನ್ನು ಶುರು ಮಾಡಿದ್ದಾರೆ. ಜುಲೈ 14 ರಿಂದ ಜುಲೈ 22ವರೆಗೆ ಚಿತ್ರತಂಡ ಪುಷ್ಕರಣಿಯಲ್ಲಿ ಶೂಟಿಂಗ್ ಮಾಡಲು ಅನುಮತಿ ಪಡೆದುಕೊಂಡಿದೆ.

`ನಟ ಸಾರ್ವಭೌಮ’ ಪುನೀತ್ ರಾಜ್ ಕುಮಾರ ಅಭಿನಯದ ಸಿನಿಮಾವಾಗಿದ್ದು, ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಅವರ `ರಣವಿಕ್ರಮ’ ಚಿತ್ರವನ್ನು ನಿರ್ದೇಶಿಸಿದ್ದರು.

Comments

Leave a Reply

Your email address will not be published. Required fields are marked *