ಬೆಂಗ್ಳೂರಲ್ಲೇ ಎಗ್ಗಿಲ್ಲದೆ ನಡೀತಿದೆ ಅಕ್ರಮ ಕಲ್ಲು ಗಣಿಗಾರಿಕೆ- ದೂರು ನಿಡಿದ್ರೂ ಕ್ಯಾರೇ ಎನ್ನುತ್ತಿಲ್ಲ ಖಾಕಿ!

ಬೆಂಗಳೂರು: ಇಲ್ಲಿ ನಿತ್ಯವೂ ಸಂಭವಿಸುತ್ತೆ ಸ್ಫೋಟ. ಇಲ್ಲಿನ ಜನರಿಗೆ ನಿತ್ಯವೂ ಭೂಕಂಪನದ ಅನುಭವ. ಮನೆಯಲ್ಲಿ ಪುಟ್ಟ-ಪುಟ್ಟ ಮಕ್ಕಳು ಬೆಚ್ಚಿ ಬೀಳ್ತಾರೆ. ಇದು ಎಲ್ಲೋ ನಡೆಯುತ್ತಿರುವ ಘಟನೆ ಅಲ್ಲ. ನಮ್ಮ ಬೆಂಗಳೂರಲ್ಲೇ ನಡೆಯತ್ತಿರುವ ಅಕ್ರಮ ಗಣಿಗಾರಿಕೆ.

ಹೌದು. ಬೆಂಗಳೂರಿನ ರಾಮಚಂದ್ರಾಪುರದಲ್ಲಿ ಎಗ್ಗಿಲ್ಲದೆ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಸ್ಫೋಟಕಗಳನ್ನ ಬಳಸಬಾರದು ಅಂತ ಷರತ್ತು ವಿಧಿಸಿದ್ರೂ, ಇಲ್ಲಿ ಬ್ಲಾಸ್ಟಿಂಗ್ ನಡೆಯುತ್ತೆ. ಪೊಲೀಸರಿಗೆ ದೂರು ನೀಡಿದ್ರೂ ಕ್ಯಾರೆ ಅನ್ನಲ್ಲ. ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೂ ಬೇಜಾವಾಬ್ದಾರಿ. ದೂರು ಕೊಟ್ಟು ಕೊಟ್ಟು ಸ್ಥಳೀಯರು ಬೇಸತ್ತಿದ್ದಾರೆ.

ಉಮ್ರಾ ಡೆವಲಪರ್ಸ್ ಮೂಲಕ ನವೀದ್ ಅನ್ನೋ ಬಿಲ್ಡರ್, ಕಲ್ಲು ಗಣಿಗಾರಿಕೆ ನಡೆಸ್ತಿದ್ದಾರೆ. ಗಣಿಗಾರಿಕೆಯಿಂದ ಆಗ್ತಿರುವ ಸಮಸ್ಯೆ ವಿರುದ್ಧ ಸ್ಥಳೀಯರು ಕೋರ್ಟ್ ಮೆಟ್ಟಿಲೇರಿದ್ರು. ನಾಲ್ಕು ತಿಂಗಳೊಳಗೆ ಸ್ಥಳೀಯರ ಮನವಿಗೆ ಸ್ಪಂದಿಸಿ ಕ್ರಮ ಜರುಗಿಸಿ ಎಂದು ಕೋರ್ಟ್ ಆದೇಶ ಕೂಡ ನೀಡ್ತು. ಆದ್ರೆ ಯಲಹಂಕ ನ್ಯೂಟೌನ್ ಪೊಲೀಸರು ಮಾತ್ರ ಒಂದು ಲಾರಿ ಸೀಜ್ ಮಾಡಿ, ಬಿಟ್ಟು ಕಳಿಸಿದ್ರು. ಇನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾತ್ರ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.

ಅಕ್ರಮಕ್ಕೆ ಸಾಕ್ಷಿಯಾಗುವ ದೃಶ್ಯಗಳು ಇದೆ. ಆದ್ರೆ ಕ್ರಮ ಮಾತ್ರ ಜರುಗಿಸುತ್ತಿಲ್ಲ. ಇಂತಹ ಅಧಿಕಾರಿಗಳ ಸಹಕಾರದಿಂದಲೇ ಎಗ್ಗಿಲ್ಲದೇ ಗಣಿಗಾರಿಕೆ ನಡೆಯುತ್ತಿರೋದು. ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ಈಗಲಾದ್ರೂ ಕ್ರಮ ಕೈಗೊಳ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.

Comments

Leave a Reply

Your email address will not be published. Required fields are marked *