ತಾಜ್ ಮಹಲಿನಲ್ಲಿ ನಮಾಜ್ ಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ತಾಜ್ ಮಹಲ್ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದ್ದು ಅಲ್ಲಿ ನಮಾಜ್ ಮಾಡಬಾರದು ಎಂದು ಸುಪ್ರಿಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ನೇತೃತ್ವದ ದ್ವಿಸದಸ್ಯ ಪೀಠ, ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದ್ದು, ತಾಜ್ ಮಹಲ್ ನಲ್ಲಿ ನಮಾಜ್ ಮಾಡಬಾರದು. ನಮಾಜ್ ಮಾಡಲು ಸಮೀಪವೇ ಹಲವು ಮಸೀದಿಗಳಿವೆ. ಜನರು ಅಲ್ಲಿಯೇ ಹೋಗಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ತಾಜ್ ಮಹಲ್ ನಲ್ಲಿ ಹೊರಗಿನವರು ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಆಗ್ರಾ ಆಡಳಿತ ಮಂಡಳಿ ನಿರಾಕರಿಸಿತ್ತು. ಅಲ್ಲದೇ ಜಿಲ್ಲಾ ನ್ಯಾಯಲಯವು ಸಹ 2018ರ ಜನವರಿ 18ರಂದು ತಾಜ್ ಮಹಲ್ ನಲ್ಲಿ ಶುಕ್ರವಾರ ದಿನದಂದು ಸ್ಥಳಿಯರು ಹಾಗೂ ಹೊರಗಿನವರು ಪ್ರಾರ್ಥನೆಯನ್ನು ಸಲ್ಲಿಸಬಾರದೆಂದು ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಆದೇಶವನ್ನು ಪ್ರಕಟಿಸಿದೆ.

ಪ್ರಾರ್ಥನೆ ಸಲ್ಲಿಸಲು ತಾಜ್ ಮಹಲ್‍ಗೆ ಯಾಕೆ ಹೋಗಬೇಕು ಎಂದು ಪ್ರಶ್ನಿಸಿದ ಪೀಠ, ತಾಜ್ ಮಹಲ್ ವಿಶ್ವದ ಅದ್ಭುತ ಪ್ರದೇಶವಾಗಿದ್ದು, ಇಲ್ಲಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರೂ ವರ್ಷಪೂರ್ತಿ ಆಗಮಿಸುತ್ತಲೇ ಇರುತ್ತಾರೆ. ಹೀಗಾಗಿ ತಾಜ್ ಮಹಲ್ ನಲ್ಲಿ ಪ್ರಾರ್ಥನೆಗೆ ಅವಕಾಶ ನೀಡುತ್ತಿಲ್ಲ. ಅವಕಾಶ ನೀಡಿದರೆ ಭದ್ರತೆಗೆ ಸಮಸ್ಯೆಯಾಗುತ್ತದೆ. ಅಲ್ಲಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಬದಲು ಸಮೀಪವೇ ಇರುವ ಬೇರೆ ಮಸೀದಿಗಳಿಗೆ ತೆರಳಬಹುದು ಎಂದು ತನ್ನ ಆದೇಶದಲ್ಲಿ ಹೇಳಿದೆ.

Comments

Leave a Reply

Your email address will not be published. Required fields are marked *