ಪರೀಕ್ಷೆ ಬರೀಬೇಕಂದ್ರೆ ತಾಳಿ, ಕಾಲುಂಗುರ ತೆಗೀರಿ- ನೆಟ್ ಎಕ್ಸಾಂ ಬರೆಯೋಕೆ ಹೋದವರಿಗೆ ಶಾಕ್

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್‍ಇಟಿ)ಯನ್ನು ತೆಗೆದುಕೊಂಡ ಮಹಿಳಾ ಅಭ್ಯರ್ಥಿಗಳಿಗೆ ಪರಿವೀಕ್ಷಕರು ತಾಳಿ ಮತ್ತು ಕಾಲುಂಗುರ ತೆಗೆಸಿ ಪರೀಕ್ಷೆ ಬರೆಸಿ ಕಿರಿಕಿರಿ ಮಾಡಿದ್ದಾರೆ.

ಇಂದು ನೆಟ್ ಪರೀಕ್ಷೆ ಬೆಂಗಳೂರಿನ ಜೆಪಿನಗರದ ಬ್ರಿಗೇಡ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ನಿಗದಿಯಾಗಿತ್ತು. ಪರೀಕ್ಷೆಗೆ ತೆರಳಿದ ಮಹಿಳಾ ಅಭ್ಯರ್ಥಿಗಳಿಗೆ ತಾಳಿ ಮತ್ತು ಕಾಲುಂಗುರ ತೆಗೆದು ಕೊಠಡಿಯೊಳಗೆ ಬರಬೇಕು ಎಂದು ಪರೀಕ್ಷಾ ಪರಿವೀಕ್ಷಕರು ಕಿರಿಕಿರಿ ಉಂಟು ಮಾಡಿದ್ದಾರೆ.

ಪರಿವೀಕ್ಷಕರು ಹೇಳಿದ ಮಾತಿನಿಂದ ಕೆಲ ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ಬರೆಯದೆ ವಾಪಸ್ ಹೋಗಿದ್ದಾರೆ. ಇನ್ನು ಕೆಲವರು ಶಾಲಾ ಆಡಳಿತ ಮಂಡಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರು ಅವರು ತಾಳಿ ತೆಗೆಯದೆ ಇದ್ದರೆ ಪರೀಕ್ಷೆ ಬರೆಯಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಕೊನೆಗೆ ಪತಿಯ ಮುಂದೆಯೇ ಪತ್ನಿಯರ ತಾಳಿ ಕಾಲುಂಗುರ ತೆಗೆಸಿದ್ದಾರೆ.

ಇದು ನಮ್ಮ ನಂಬಿಕೆ ಮತ್ತು ಧರ್ಮಕ್ಕೆ ವಿರುದ್ಧವಾದುದ್ದು. ಮೊಬೈಲ್, ಪರ್ಸ್ ಪರೀಕ್ಷಾ ಕೇಂದ್ರದೊಳಕ್ಕೆ ತೆಗೆದುಕೊಂಡು ಹೋಗುವಂತಿಲ್ಲ ಎನ್ನುವ ನಿಯಮವಿದೆ. ಆದರೆ ತಾಳಿ ಮತ್ತು ಕಾಲುಂಗುರ ತೆಗೆಯುವಂತೆ ಪರೀಕ್ಷಾ ನಿಯಮದಲ್ಲೂ ಇಲ್ಲ. ಅಷ್ಟೇ ಅಲ್ಲದೇ ಮುಸ್ಲಿಂ ಯುವತಿಯರ ಬುರ್ಖಾ ತೆಗೆಸಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ. ಎಲೆಕ್ಟ್ರಿಕ್ ವಸ್ತುಗಳಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕಿದ್ದರೂ ಈ ರೀತಿ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಅಭ್ಯರ್ಥಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಸೆಕ್ಯೂರಿಟಿ ಆಫೀಸರ್ ಸ್ಪಷ್ಟನೆ: ಸೆಕ್ಯುರಿಟಿ ಆಫೀಸರ್ ಗಳ ದೌರ್ಜನ್ಯ ವರದಿಯಾಗುತ್ತಿದ್ದಂತೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ಇದು ಸೆಕ್ಯುರಿಟಿ ಗಾರ್ಡ್ ಹಂತದಲ್ಲಿ ಆಗಿರುವ ತಪ್ಪು. ಕಚೇರಿಯ ಒಳಗಿಂದ ಯಾವುದೇ ಮೆಟಲ್ ವಸ್ತುಗಳನ್ನ ಬಿಡಬಾರದು ಅನ್ನೋ ಮಾಹಿತಿ ನೀಡಲಾಗಿತ್ತು. ಇದನ್ನ ಗಾರ್ಡ್ ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಾಳಿ, ಕಾಲುಂಗುರ ಬಿಚ್ಚಿಸಿದ್ದಾರೆ. ಇದರ ಬಗ್ಗೆ ತಿಳಿಯುತ್ತಿದ್ದಂತೆ ಸರಿ ಪಡಿಸಿದ್ದೇವೆ. ತದನಂತರ ಯಾರಿಗೂ ತಾಳಿ, ಕಾಲುಂಗುರ ತೆಗೆಸೋ ಕೆಲಸ ಮಾಡಿಲ್ಲ. ನಮಗೂ ಮಾಂಗಲ್ಯ ಪ್ರಾಮುಖ್ಯತೆ ಗೊತ್ತು. ತಪ್ಪನ್ನ ಸರಿ ಪಡಿಸಿ ಪರೀಕ್ಷಾ ಕೇಂದ್ರದೊಳಕ್ಕೆ ಎಲ್ಲರನ್ನ ಕಳಿಸಿಕೊಟ್ಟಿದ್ದೇವೆ ಅನ್ನೋ ಉಡಾಫೆ ಸ್ಪಷ್ಟನೆಯನ್ನು ಸೆಕ್ಯುರಿಟಿ ಆಫೀಸರ್ ಮಂಜುನಾಥ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *