ಉತ್ತರ ಕರ್ನಾಟಕಕ್ಕೆ ಅನ್ಯಾಯವಾದ್ರೆ ಪ್ರತ್ಯೇಕ ರಾಜ್ಯಕ್ಕೆ ಕೂಗು- ಜಗದೀಶ್ ಶೆಟ್ಟರ್!

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರ ಬಂದ ಮೇಲೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ, ಅಲ್ಲದೇ ಬಜೆಟ್ ಹಾಗೂ ಸಚಿವ ಸಂಪುಟದಲ್ಲಿಯೂ ಕೂಡ ಅನ್ಯಾಯ ಮುಂದುವರೆದಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿಯವರು ಮಂಡ್ಯ, ಹಾಸನ, ರಾಮನಗರಕ್ಕೆ ಸೀಮಿತವಾದ ಬಜೆಟ್ ಮಂಡಿಸಿದ್ದಾರೆ. ಇದರಿಂದ ಉತ್ತರ ಕರ್ನಾಟಕ ಹಾಗೂ ಕರಾವಳಿಗೆ ಅನ್ಯಾಯವಾಗಿದೆ. ಬಜೆಟ್‍ನಲ್ಲಿ ನಂಜುಂಡಪ್ಪ ವರದಿ ಬಗ್ಗೆ ಪ್ರಸ್ತಾವನೆ ಮಾಡಿಲ್ಲ. ಹೊಸ ತಾಲೂಕುಗಳಿಗೆ ಅನುದಾನ ನೀಡಿಲ್ಲ ಎಂದು ಕಿಡಿಕಾರಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಎಚ್.ಕೆ. ಪಾಟೀಲ್ ಸಿಎಂಗೆ ಪತ್ರ ಬರೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಚ್ ಕೆ ಪಾಟೀಲ್ ಮಂತ್ರಿಯಾಗಿಲ್ಲ, ಕೆಪಿಸಿಸಿ ಅಧ್ಯಕ್ಷರೂ ಆಗಿಲ್ಲ. ಸ್ಥಾನಮಾನ ಸಿಗದಿದ್ದಕ್ಕೆ ಬಂಡಾಯ ಎದ್ದಿರಬೇಕು. ಯಾಕೆ ಬಂಡಾಯ ಎದ್ದಿದ್ದಾರೆ ಎಂದು ಎಚ್.ಕೆ. ಪಾಟೀಲ್ ಸ್ಪಷ್ಟೀಕರಣ ನೀಡಬೇಕು. ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷರಾಗಿದ್ದರೆ ಧ್ವನಿ ಎತ್ತುತ್ತಿದ್ದರೆ ಎಂದು ಪ್ರಶ್ನಿಸಿದರು.

ಸರ್ಕಾರ ಈ ಅನ್ಯಾಯವನ್ನು ಕೂಡಲೇ ಸರಿಪಡಿಸುವ ಕೆಲಸ ಮಾಡದಿದ್ದರೆ ಅನಾಹುತವಾಗುತ್ತದೆ ಎಂದು ಎಚ್ಚರಿಕೆ ನೀಡಿ ಶಟ್ಟರ್, ನಿಜವಾಗಿಯೂ ಎಚ್ ಕೆ ಪಾಟೀಲ್ ರಿಗೆ ಉತ್ತರ ಕರ್ನಾಟಕ ಭಾಗದ ಅಭಿವೃಧಿ ಬಗ್ಗೆ ಕಾಳಜಿ ಇದ್ದರೆ, ಅವರ ಜೊತೆ ನಾವು ಕೈ ಜೊಡಿಸುತ್ತೇವೆ. ಇದು ಹೀಗೆ ಮುಂದುವರೆದರೆ ತಾರತಮ್ಯದ ಕಾರಣ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗುತ್ತೆ. ಬೇರೆ ರಾಜ್ಯ ಮಾಡುವುದೇ ಸರಿ ಎನ್ನುವ ಅಭಿಪ್ರಾಯ ಬರುತ್ತದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *