ಬಜೆಟ್ ನಲ್ಲಿ ಸಾರಿಗೆ ಇಲಾಖೆಯಿಂದ ಜನತೆಗೆ ಗುಡ್ ನ್ಯೂಸ್

ಬೆಂಗಳೂರು: ಬಹು ನಿರೀಕ್ಷೆಯ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ವಾಹನ ಸವಾರರ ಜೇಬಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ಟಾಮಿ ಕತ್ತರಿ ಹಾಕಿದ್ದಾರೆ.

ಗುರುವಾರ ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಇದರಿಂದ ಬಸ್ ದರ ಸಹ ಏರಿಕೆಯಾಗುತ್ತೆನೋ ಎಂದು ಜನಸಾಮಾನ್ಯರು ಅಂದಾಜಿಸಿದ್ದರು. ಆದರೆ ಸಂಜೆ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಬಿಎಂಟಿಸಿ ದರ ಏರಿಕೆಯಿಲ್ಲ ಎಂದಿದ್ದಾರೆ.

ಬಿಎಂಟಿಸಿ ಬಸ್ ಮತ್ತು ಟಿಕೆಟ್ ದರವನ್ನು ಶೇ. 15 ರಿಂದ 20 ರಷ್ಟು ಏರಿಕೆ ಮಾಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜು ಅವರು ಸಚಿವರಿಗೆ ಮನವಿ ಸಲ್ಲಿಸಿದ್ದರು. ಡೀಸೆಲ್ ದರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಗಮವು ನಿತ್ಯ ಕೋಟ್ಯಾಂತರ ರೂಪಾಯಿಗಳ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಬಸ್, ಪ್ರಯಾಣ ದರ ಏರಿಸಬೇಕು ಎಂದು ಕೋರಲಾಗಿತ್ತು. ಆದರೆ ಸರ್ಕಾರ ಬಂದು ಕೆಲ ದಿನಗಳಲ್ಲೇ ದರ ಏರಿಕೆ ಮಾಡಿದ್ರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ತಿರಸ್ಕರಿಸಿದ್ದರು.

ಪ್ರೈವೇಟ್ ಬಸ್ ಸರ್ವಿಸ್ ಗಳ ತೆರಿಗೆ ಹೆಚ್ಚಳ ಮಾಡಿದ್ದೇವೆ. ಇದರಿಂದ ವಾರ್ಷಿಕ 56 ಕೋಟಿ ರೂ. ಆದಾಯ ಸಾರಿಗೆ ಇಲಾಖೆಗೆ ಬರಲಿದೆ. ನಾಲ್ಕು 4,500 ಬಸ್ ಗಳನ್ನ ಖರೀದಿ ಮಾಡಲು ಬಜೆಟ್ ನಲ್ಲಿ ಅನುಮೋದನೆ ಸಿಕ್ಕಿದೆ. ಜೊತೆಗೆ ನೂರು ಕೋಟಿ ರೂಪಾಯಿ ಅಭಿವೃದ್ಧಿಗೆ ನೀಡಿದ್ದಾರೆ. ನಾವು ಒಂದು ಸಾವಿರ ಕೋಟಿ ಬೇಡಿಕೆ ಇಟ್ಟಿದ್ದೆವು. ಆದರೆ ನಮ್ಮ ಸಮರ್ಪಕವಾಗಿ ಬಜೆಟ್ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಸಿಗುವ ಭರವಸೆ ಇದೆ. ಹಾಗೇ ಎಲೆಕ್ಟ್ರಿಕಲ್ ಬಸ್ ಖರೀದಿ ಮಾಡಲು ಮುಂದಾಗಿದ್ದೇವೆ. ಬೆಂಗಳೂರಿಗೆ ಎಲೆಕ್ಟ್ರಿಕಲ್ ಬಸ್ ಗಳನ್ನ ಪರಿಚಯಿಸುವ ಕೆಲಸ ಮಾಡುತ್ತೇವೆ ಅಂತ ಸಚಿವ ತಮ್ಮಣ್ಣ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *