ಮನೆಬಿಟ್ಟು ಹೋಗಿದ್ದಕ್ಕೆ ಪತ್ನಿಯನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ಪತಿ

ರಾಮನಗರ: ಒಂದು ತಿಂಗಳು ಮನೆಬಿಟ್ಟು ಹೋಗಿದ್ದ ಪತ್ನಿಯನ್ನು ಕೊಂದು, ಬಳಿಕ ಹೆದರಿ ಮಕ್ಕಳಿಗೆ ವಿಷ ನೀಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಕನಕಪುರದ ವಿನಾಯಕ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿನಾಯಕ ನಗರದ ನಿವಾಸಿಗಳಾದ ಪತಿ ಶಿವು (40) ಹಾಗೂ ಪತ್ನಿ ರೇಖಾ (22) ಮೃತ ದುರ್ದೈವಿಗಳು. ಶುಕ್ರವಾರ ಘಟನೆ ನಡೆದಿದ್ದು, ಶನಿವಾರ ಸಂಜೆ ಸ್ಥಳೀಯರ ಗಮನಕ್ಕೆ ಬಂದಿದ್ದು, ಅದೃಷ್ಟವಶಾತ್ ಇಬ್ಬರು ಮಕ್ಕಳು ವಿಷ ಆಹಾರ ಸೇವಿಸಿದ್ದರೂ ಬದುಕುಳಿದಿದ್ದಾರೆ.

ಒಂದು ತಿಂಗಳ ಹಿಂದೆ ರೇಖಾ ಮನೆ ಬಿಟ್ಟು ಹೋಗಿದ್ದು, ಶುಕ್ರವಾರ ಪತಿಯ ಮನೆಗೆ ಮರಳಿದ್ದರು. ಮನೆಯಲ್ಲಿ ಯಾರು ಇಲ್ಲದಿದ್ದ ವೇಳೆ ರಾತ್ರಿ ಶಿವು ಹಾಗೂ ರೇಖಾ ಮಧ್ಯ ಮಾತಿನ ಚಕಮಕಿ ಪ್ರಾರಂಭವಾಗಿದ್ದು, ಕೋಪಗೊಂಡ ಶಿವು ರೇಖಾ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ರೇಖಾ ಅವರು ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನಿಂದ ಗಾಭರಿಗೊಂಡ ಶಿವು ತನ್ನ ಮಕ್ಕಳಿಗೆ ವಿಷ ಮಿಶ್ರಿತ ಊಟ ನೀಡಿದ್ದು, ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶನಿವಾರ ಸಂಜೆಯಾದರೂ ಮನೆಯಿಂದ ಯಾರೂ ಹೊರ ಬರದಿದ್ದರಿಂದ ನೆರೆಹೊರೆಯವರಿಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮನೆ ಕಿಟಕಿಯಲ್ಲಿ ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಕ್ಕಳು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *