ಪ್ರತಿಷ್ಠಿತ ಐಶಾರಾಮಿ ವೋಲ್ವೋ ಕಂಪೆನಿಗೆ ಶಾಕ್ ನೀಡಿದ ಸಾರಿಗೆ ಸಚಿವರು!

ಬೆಂಗಳೂರು: ರಾಜ್ಯದ ಎಲ್ಲಾ ಸಾರಿಗೆ ನಿಗಮಗಳಲ್ಲಿನ ಹೊಸ ವೋಲ್ವೋ ಬಸ್ ಖರೀದಿಗೆ ಸಾರಿಗೆ ಸಚಿವರಾದ ಡಿ.ಸಿ.ತಮ್ಮಣರವರು ಬ್ರೇಕ್ ಹಾಕಿದ್ದಾರೆ.

ವೋಲ್ವೋ ಬಸ್‍ಗಳ ವ್ಯಾಮೋಹಕ್ಕೆ ಒಳಗಾಗಿದ್ದ ಬಿಎಂಟಿಸಿ, ಕೆಎಸ್‍ಆರ್ ಟಿಸಿ, ಎನ್‍ಇಕೆಎಸ್‍ಆರ್ ಟಿಸಿ, ಎನ್‍ಡಬ್ಲ್ಯೂಕೆಎಸ್‍ಆರ್ ಟಿಸಿಯ ನಿಗಮಗಳಿಗೆ ಸಾರಿಗೆ ಇಲಾಖೆ ತಣ್ಣೀರು ಎರಚಿದ್ದು, ಸಾರಿಗೆ ಸಂಸ್ಥೆಯವರು ಹೊಸ ಬಸ್ ಗಳ ಖರೀದಿಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಚಿವರು ಬ್ರೇಕ್ ಹಾಕುವ ಮೂಲಕ ವೋಲ್ವೋ ಕಂಪೆನಿಗೆ ಬಿಗ್ ಶಾಕ್ ನೀಡಿದ್ದಾರೆ.

ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಸಚಿವರು ಈ ನಿರ್ಧಾರ ತೆಗೆದುಕೊಂಡಿದ್ದು, ನಗರ ಸಾರಿಗೆಗೆ ವೋಲ್ವೋ ಬಸ್ ಖರೀದಿ ಮಾಡೋ ಹಾಗಿಲ್ಲ ಹಾಗೂ ದುಬಾರಿ ಬೆಲೆ ಬಸ್ ಖರೀದಿ ಪ್ರಸ್ತಾವನೆ ನನ್ನ ಮುಂದೆ ತರಬೇಡಿ ಎಂದು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಚಿವರ ಈ ಖಡಕ್ ನಿರ್ಧಾರವು ವೋಲ್ವೋ ಕಂಪೆನಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ವೇಳೆ ಮಾತನಾಡಿದ ಸಚಿವರು, ವೋಲ್ವೋ ಬಸ್ ನಿರ್ವಹಣೆ ದುಬಾರಿಯಾಗಿದ್ದು, ಮೈಲೇಜ್ ಸಹ ಕಡಿಮೆ ನೀಡುತ್ತದೆ. ಆದ್ದರಿಂದ ಹೊಸ ವೋಲ್ವೋ ಬಸ್ ಖರೀದಿ ನಿಲ್ಲಿಸಿದ್ದೇನೆ. ಈಗಾಗಲೇ ನಾಲ್ಕು ಸಾರಿಗೆ ಸಂಸ್ಥೆಗಳು ಐಷಾರಾಮಿ ಬಸ್ ಗಳಿಂದ ಕೈ ಸುಟ್ಟುಕೊಂಡಿವೆ ಎಂದು ತಿಳಿಸಿದರು.

ವೋಲ್ವೋ ಬಸ್ ಖರೀದಿಯಿಂದ ಅಧಿಕಾರಿಗಳು ದುಡ್ಡು ಮಾಡುತ್ತಾರೆಯೇ ಹೊರತು, ಸಂಸ್ಥೆಗೆ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದ ಅವರು 1 ಕೋಟಿ ಬೆಲೆಯ ಬಸ್‍ಗಳು ಬೇಡ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *