15 ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೆ ಪ್ರತಿಭಟನೆ – ಕೊನೆಗೂ ಸರ್ಕಾರದಿಂದ 6ಕೋಟಿ ರೂ. ಮನ್ನಾ

ಚಾಮರಾಜನಗರ: ರೈತರು ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಮಾಡುವ ಚಳುವಳಿಗಳಲ್ಲಿ ಕರನಿರಾಕರಣ ಚಳುವಳಿಯು ಒಂದು. ಹಾಗೆಯೇ ಜಿಲ್ಲೆಯ ಯಳಂದೂರು ಗ್ರಾಮಗಳ ರೈತರು ಕಳೆದ ಹದಿನೈದು ವರ್ಷಗಳಿಂದ ಕರನಿರಾಕರಣ ಚಳುವಳಿ ನಡೆಸುತ್ತಿದ್ದಾರೆ.

ಕೋಟ್ಯಾಂತರ ರೂಪಾಯಿ ವಿದ್ಯುತ್ ಬಾಕಿ ಉಳಿಸಿಕೊಂಡಿದ್ದರೂ ಸರ್ಕಾರ ಈ ಗ್ರಾಮಗಳಿಗೆ ವಿದ್ಯುತ್ ಕಡಿತಗೊಳಿಸುವ ಧೈರ್ಯಮಾಡಿಲ್ಲ. ಇದೀಗ ರೈತರ ಚಳುವಳಿಗೆ ಮಣಿದ ಸರ್ಕಾರ ಕೋಟ್ಯಾಂತರ ರೂಪಾಯಿ ವಿದ್ಯುತ್ ಬಾಕಿ ವಸೂಲಿ ಮಾಡದೆ ಇರಲು ನಿರ್ಧರಿಸಿದೆ. ಆದರೂ ತಮ್ಮ ಬೇಡಿಕೆ ಈಡೇರುವವರೆಗೂ ಸರ್ಕಾರಕ್ಕೆ ಯಾವುದೇ ರೀತಿಯ ಕರ ನೀಡುವುದಿಲ್ಲ ಎಂಬುದು ರೈತರ ನಿಲುವಾಗಿದೆ.

ಯಳಂದೂರಿನ ರೈತರ ಕರೆಂಟ್ ಬಿಲ್ ಹಿಡ್ಕೊಂಡು ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಕೃಷಿ ಪಂಪ್ ಸೆಟ್ ಗಳಿಗೆ 24 ಗಂಟೆ ವಿದ್ಯುತ್, ಸಮಾನ ಶಿಕ್ಷಣ ನೀತಿ ಜಾರಿ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಕೊನೆಗೆ ಸುಸ್ತಾಗಿ ಕರನಿರಾಕರಣ ಚಳವಳಿ ನಡೆಸುತ್ತಿದ್ದರು. ಹೊನ್ನೂರು, ಕೆಸ್ತೂರು ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳ ರೈತರು ಕಳೆದ 15 ವರ್ಷಗಳಿಂದ ಸರ್ಕಾರಕ್ಕೆ ಕಂದಾಯ, ನೀರಿನ ತೆರಿಗೆ, ವಿದ್ಯುತ್ ಬಿಲ್ ಹೀಗೆ ಯಾವುದೇ ರೀತಿಯ ಕರವನ್ನು ಕಟ್ಟುತ್ತಿಲ್ಲ.

ಈ ಗ್ರಾಮಗಳಲ್ಲಿ ಸುಮಾರು 4 ಸಾವಿರದ 570 ರೈತರು ಕಳೆದ 15 ವರ್ಷಗಳಿಂದ 6 ಕೋಟಿ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಪಾವತಿಸುವಂತೆ ಹಲವಾರು ಬಾರಿ ನೋಟೀಸ್ ನೀಡಿ ಎಚ್ಚರಿಕೆ ನೀಡಿದ್ದರೂ ಬಗ್ಗದ ರೈತರು ಅಧಿಕಾರಿಗಳನ್ನೇ ಹಿಮ್ಮೆಟ್ಟಿಸಿದ ಉದಾಹರಣೆಗಳಿವೆ. ಹೀಗಾಗಿ ಇದೀಗ ಈವರೆಗಿನ ಬಿಲ್ ಮನ್ನಾ ಮಾಡಿ ಇನ್ಮುಂದೆ ಬರುವ ಬಿಲ್ ಪಾವತಿಸುವಂತೆ ಸೂಚಿಸಿ, ಹೊಸ ಮೀಟರ್ ಅಳವಡಿಸಿದೆ ಎಂದು ಗ್ರಾಮಸ್ಥ ಸಂತೋಷ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *