ಜೆಡಿಎಸ್ ಮಂತ್ರಿಗಳು ಈಗ ಹೊಸ ಬಟ್ಟೆ ಹಾಕ್ಕೊಂಡು ಓಡಾಡ್ತಿದ್ದಾರೆ- ಸಿದ್ದರಾಮಯ್ಯ ಪರ ಶಾಸಕ ಸುಧಾಕರ್ ಬ್ಯಾಟಿಂಗ್

ಚಿಕ್ಕಬಳ್ಳಾಪುರ: ಸೋತರೂ ಜೆಡಿಎಸ್ ನವರು ಮುಖ್ಯಮಂತ್ರಿಯಾದರು. ಹೀಗಾಗಿ ಅವರಿಗೆ ಈಗ ಮನೋಧೈರ್ಯ ಬಂದಿದೆ ಎಂದು ಶಾಸಕ ಡಾ.ಸುಧಾಕರ್ ಕೆ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಸಮ್ಮಿಶ್ರ ಸರ್ಕಾರಕ್ಕೆ ಹೆಚ್ಚು ಆಯಸ್ಸು ಸಿಗಲಿ ಅಂತಾ ದೇವರಲ್ಲಿ ಬೇಡಿಕೊಂಡಿರುವೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಕಡಿಮೆ ಸ್ಥಾನ ಪಡೆದಿದ್ದರೂ, ಮುಖ್ಯಮಂತ್ರಿ ಸ್ಥಾನವನ್ನು ತಾವೇ ಪಡೆದುಕೊಂಡರು. ಹೀಗಾಗಿ ಅವರಿಗೆ ಹೆಚ್ಚು ಸಚಿವ ಸ್ಥಾನ ದೊರೆತಿದೆ. ಜೆಡಿಎಸ್ ಮಂತ್ರಿಗಳು ಈಗ ಹೊಸ ಹೊಸ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದಾರೆ. ಇದು ಸ್ವಾಭಾವಿಕ, ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯವಾದರೆ ಸಮ್ಮಿಶ್ರ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

 

ಕಾಂಗ್ರೆಸ್ 80 ಕ್ಷೇತ್ರಗಳಲ್ಲಿ ಜಯ ಸಾಧಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರಿಶ್ರಮವೇ ಕಾರಣವಾಗಿದೆ. ಅವರನ್ನು ಯಾರೂ ಲಘುವಾಗಿ ಪರಿಗಣಿಸುವುದು ಸೂಕ್ತವಲ್ಲ. 13 ಬಾರಿ ಬಜೆಟ್ ಮಂಡಿಸಿರುವ ಸಾಧನೆಯನ್ನು ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ಉಳಿಯಬೇಕಾದರೆ ಸಿದ್ದರಾಮಯ್ಯ ಅವರ ಭಾವನೆಗಳಿಗೆ ಸ್ಪಂದಿಸುವುದು ಒಳ್ಳೆದು. ಸಿದ್ದರಾಮಯ್ಯ ಅವರನ್ನು ಸೈಡ್ ಲೈನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿ ಸಾಟಿಯಾಗಿರುವ ನಾಯಕ ಅಂದ್ರೆ ಸಿದ್ದರಾಮಯ್ಯ ಅವರು ಒಬ್ಬರೇ ಎಂದು ಮಾಜಿ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರು ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಅವಶ್ಯಕತೆಯಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿರುವುದರಲ್ಲಿ ತಪ್ಪಿಲ್ಲ. ಕಳೆದ 5 ವರ್ಷಗಳಲ್ಲಿ ಅದರಲ್ಲೂ ಸಿದ್ದರಾಮಯ್ಯ ಕೊಟ್ಟ ಕಾರ್ಯಕ್ರಮಗಳನ್ನು ಸಿಎಂ ಕುಮಾರಸ್ವಾಮಿ ಅವರು ಮುಂದುವರಿಸಲಿ. ಸಾಧ್ಯವಾದರೆ ಅದರ ಜೊತೆಗೆ ತಮ್ಮ ಅಂಶಗಳನ್ನು ಸೇರಿಸಿ ಸಪ್ಲಿಮೆಂಟರಿ ಬಜೆಟ್ ಮಂಡಿಸಬಹುದು ಎಂದು ಸುಧಾಕರ್ ಹೇಳಿದರು.

Comments

Leave a Reply

Your email address will not be published. Required fields are marked *