ಬಳ್ಳಾರಿಯಲ್ಲಿ ವಿಶೇಷ ಕೆಲಸ ಮಾಡಿ ಬಂದ್ರು ಪವರ್ ಸ್ಟಾರ್!

ಬೆಂಗಳೂರು: ನಟಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕೆಂದು ಬಳ್ಳಾರಿಗೆ ಹೋಗಿದ್ದ ಪುನೀತ್ ರಾಜ್‍ಕುಮಾರ್ ಯಾರಿಗೂ ಗೊತ್ತಾಗದಂತೆ ಅಲ್ಲೊಂದು ವಿಶೇಷ ಕೆಲಸ ಮಾಡಿ ಬಂದಿದ್ದಾರೆ. ತಂದೆಯಂತೆಯೇ ಸಮಾಜಮುಖಿಯಾಗಿ ಕೆಲಸ ಮಾಡಿ ಅನೇಕರಿಗೆ ಮಾದರಿಯಾಗಿದ್ದಾರೆ.

ಕಳೆದ ವಾರ ನಟಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕಾಗಿ ಪುನೀತ್ ರಾಜ್‍ಕುಮಾರ್ ಬಳ್ಳಾರಿಯಲ್ಲೇ ಸುಮಾರು ಐದಾರು ದಿನದಿಂದ ಶೂಟಿಂಗ್ ನಡೆಸುತ್ತಿದ್ದರು. ಈ ಮಧ್ಯೆ ಅವರು ಸಮಾಜಕ್ಕೆ ಸಂದೇಶ ಸಾರುವ ಕೆಲಸವನ್ನು ಮಾಡಿದ್ದಾರೆ.

ಡಾ. ರಾಜ್‍ಕುಮಾರ್ ರೈತರಿಗೆ ಹಾಗೂ ಅಭಿಮಾನಿಗಳಿಗೆ ಒಳ್ಳೆಯ ಸಂದೇಶ ಸಿಗುತ್ತೆ ಎಂದಾದರೆ ಎರಡು ಮಾತನಾಡೋದರಲ್ಲೇನು ಎಂದುಕೊಂಡು ಉಚಿತವಾಗೇ ಸರ್ಕಾರಿ ಜಾಹಿರಾತಿನಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ಇದೀಗ ಪುನೀತ್ ತಂದೆಯ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ.

ಬಳ್ಳಾರಿ ಪೊಲೀಸರು ಕಳೆದ ಐದಾರು ತಿಂಗಳ ಹಿಂದೆ ಅಂಬುಲೆನ್ಸ್‍ಗೆ ದಾರಿ ಬಿಡಿ ಎನ್ನುವ ಅಭಿಯಾನ ಶುರುಮಾಡಿದ್ದರು. ಈ ಅಭಿಯಾನದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡಿದ್ದರು. ವಿಡಿಯೋ ಮೂಲಕ ಸಂದೇಶ ನೀಡಿ ತಮ್ಮಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಇದೇ ಅಭಿಯಾನದಲ್ಲಿ ಪುನೀತ್ ರಾಜ್‍ಕುಮಾರ್ ಕೈ ಜೋಡಿಸಿದ್ದಾರೆ. ಜಾಗೃತಿಯ ಫಲಕ ಹಿಡಿದು ಅಂಬ್ಯುಲೆನ್ಸ್ ಗೆ ದಾರಿ ಬಿಡಿ ಎಂದು ಕೇಳಿಕೊಂಡಿದ್ದಾರೆ.

ಪುನೀತ್ ಯಾವುದೇ ಕಾರ್ಯಕ್ರಮಕ್ಕೆ ಹೋಗಬೇಕಾದರೆ ಬಹಳ ಹಿಂದಿನಿಂದಲೇ ಡೇಟ್ಸ್ ಬುಕ್ ಆಗಿರಬೇಕಾಗುತ್ತೆ. ಆದರೆ ಈ ಜಾಗೃತಿ ಅಭಿಯಾನಕ್ಕಾಗಿ ಬಳ್ಳಾರಿ ಪೊಲೀಸರು ಕೇಳಿಕೊಂಡಾಗ ಆ ಕೂಡಲೇ ಪೊಲೀಸರ ಮನವಿ ಒಪ್ಪಿಕೊಂಡು ಶೂಟಿಂಗ್ ಜಾಗದಲ್ಲೇ ಶೂಟಿಂಗ್ ಮಾಡಲು ಸಮಯ ಕೊಟ್ಟಿದ್ದಾರೆ.

ಕೋಟಿ ಕೋಟಿ ಹಣ ಸುರಿದು ಜಾಹಿರಾತಿಗಾಗಿ ತಾರೆಗಳನ್ನ ಬಳಸಿಕೊಳ್ಳುತ್ತಾರೆ. ಆದರೆ ಅದಕ್ಕೂ ಮೀರಿ ಸಾಮಾಜಿಕ ಕಳಕಳಿ ಬೀರುವ ಜಾಹಿರಾತಿನ ವಿಷಯ ಬಂದಾಗ ಉದಾರತೆ ತೋರಿಸುವ ಎಷ್ಟೋ ತಾರೆಗಳಿದ್ದಾರೆ. ಅಂಥದ್ದೇ ಕೆಲಸ ಪುನೀತ್ ರಾಜ್‍ಕುಮಾರ್ ಈಗ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *