ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು!

ಮಂಡ್ಯ: ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ಬೈಕ್ ಸವಾರರೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೌಡಯ್ಯನದೊಡ್ಡಿ ಗ್ರಾಮದ ಬಳಿ ನಡೆದಿದೆ.

ಕಬ್ಬನಹಳ್ಳಿ ಗ್ರಾಮದ ಶಿವಲಿಂಗೇಗೌಡ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಸರ್ಕಾರಿ ಶಾಲೆಯಲ್ಲಿ ಎಫ್‍ಡಿಎ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಿವಲಿಂಗೇಗೌಡ ಕೆಎಂ ದೊಡ್ಡಿ, ಮಂಡ್ಯ ಮಾರ್ಗದ ರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದರು.

ಈ ವೇಳೆ ಗೌಡಯ್ಯನದೊಡ್ಡಿ ಗ್ರಾಮದ ಬಳಿ ರಸ್ತೆಯಲ್ಲಿದ್ದ ಗುಂಡಿಗೆ ಬೈಕ್ ಇಳಿದ ಪರಿಣಾಮ ಆಯತಪ್ಪಿ ಶಿವಲಿಂಗೇಗೌಡ ಬಿದ್ದಿದ್ದಾರೆ. ಕೆಳಗೆ ಬಿದ್ದ ಶಿವಲಿಂಗೇಗೌಡ ತಲೆಯ ಮೇಲೆ ಹಿಂದೆ ಬರುತ್ತಿದ್ದ ಸರ್ಕಾರಿ ಬಸ್ಸಿನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಸ್ಥಳೀಯರ ಆರೋಪವನ್ನು ನಿರಾಕರಿಸಿದ ಬಸ್ ಚಾಲಕ ಬೇರೆ ಯಾವುದೋ ವಾಹನ ಅಪಘಾತ ನಡೆಸಿರಬಹುದು. ನಮಗೂ ಅಪಘಾತಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಘಟನೆಯ ಸಂಬಂಧ ಕೆಎಂ ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *